ಬೆಳಗಾವಿ: ಸಮಾಜದ ಸ್ವಸ್ಥೃ ಹಾಳು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಹಾಗೂ ಹಾರೂಗೇರಿಯಲ್ಲಿ ಪ್ರೀತಿಸಲು ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದು ಕೊಲೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಕೇರಳ ಮೂಲದ ಯುವಕನಿಂದ ಮೋಸಕ್ಕೆ ಒಳಗಾದ ಯುವತಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.
ಇಂತಹ ಕೃತ್ಯಗಳಿಂದ ಬೆಳಗಾವಿ ಜಿಲ್ಲೆಗೆ ಅವಮಾನವಾಗುತ್ತಿದೆ. ಮಹಿಳೆ ಹಾಗೂ ಮಕ್ಕಳು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ನಗರದ ಕಾಲೇಜುಗಳಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚುತ್ತಿರುವ ಕುರಿತು ಸಾಕಷ್ಟು ಆರೋಪ ಕೇಳಿಬಂದಿದ್ದು, ಪೊಲೀಸ್ ಇಲಾಖೆ ದುಷ್ಕರ್ಮಿಗಳ ಹೆಡೆಮುರಿ ಕಟ್ಟಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ವಕ್ತಾರ ಎಂ.ಬಿ.ಝಿರಲಿ, ಎಬಿವಿಪಿ ವಿಭಾಗ ಸಂಚಾಲಕ ರೋಹಿತ ಉಮನಾಬಾದಿಮಠ, ನಗರ ಸಂಘಟನಾ ಕಾರ್ಯದರ್ಶಿ ಸುರೇಶ ಜಂಗೋಣಿ, ಸಂದೀಪ ದಂಡಗಲ್ಲ, ರೋಹಿತ ಆಲುಕುಂಡಿ, ಆದಿತ್ಯ ಪಾಟೀಲ, ಚಿದಾನಂದ ಯಾವಗಲ್ಲ, ಮಂಜು ಬಿರಣ್ಣವರ, ಕಾರ್ತಿಕ ಸಿಂಗ್ಲೆ ಇತರರು ಇದ್ದರು.