ಕಲಘಟಗಿ: ತಾಲೂಕಿನಾದ್ಯಂತ ಕೋವಿಡ್-19 ಹೆಮ್ಮಾರಿ ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ವೈದ್ಯರು ತಮ್ಮ ಆರೋಗ್ಯ ರಕ್ಷಣೆಯೊಂದಿಗೆ ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಯನ್ನು ಪ್ರಾಮಾಣಿಕ ಹಾಗೂ ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಕಲಘಟಗಿ ನ್ಯಾಯಾಲಯದ ಸಿವ್ಹಿಲ್ ನ್ಯಾಯಾಧೀಶ ರಾಜಶೇಖರ ತಿಳಗಂಜಿ ಸೂಚಿಸಿದರು.
ಉಚ್ಚ ನ್ಯಾಯಾಲಯ ನಿರ್ದೇಶನದನ್ವಯ ಶನಿವಾರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರು ಹಾಗೂ ಇಲಾಖಾ ಸಿಬ್ಬಂದಿ ಉದ್ದೇಶಿಸಿ ಅವರು ಮಾತನಾಡಿದರು. ಸಾರ್ವಜನಿಕರ ಆರೋಗ್ಯ ರಕ್ಷಿಸುವ ತರಾತುರಿಯಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದನ್ನು ನಿರ್ಲಕ್ಷಿಸಬೇಡಿ. ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವೈದ್ಯರು ಮತ್ತು ಸಿಬ್ಬಂದಿ ಸಂಖ್ಯೆ ಕೊರತೆ ಇದ್ದು, ತಮ್ಮಗಳ ಆರೋಗ್ಯ ಕ್ಷೀಣಿಸಿದಲ್ಲಿ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ ಕರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರವನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದರು.
ತಾಲೂಕು ನೋಡಲ್ ಅಧಿಕಾರಿ ಡಾ. ಬಸವರಾಜ ಬಾಸೂರ, ಡಾ. ಮಹೇಶ್ವರಿ ಬಗರಿ, ಪಪಂ ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ವಕೀಲ ಎಂ.ಎಂ. ಚಲವಾದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.