ಯಲ್ಲಾಪುರ: ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತಡೆಯುಡ್ಡುತ್ತಿರುವ ಡೋಂಗಿ ಪರಿಸರವಾದಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕಿಡಿ ಕಾರಿದರು.
ತಾಲೂಕಿನ ಅರಬೈಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪರಿಸರದ ಹೆಸರಿನಲ್ಲಿ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಗೆ ತಡೆ ನೀಡಿದರು. ಇದೀಗ ಕುಮಟಾ- ಶಿರಸಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ತಡೆಯೊಡ್ಡಲು ಮುಂದಾಗಿದ್ದಾರೆ. ಆದರೆ, ಜಿಲ್ಲೆಯ ಅಭಿವೃದ್ಧಿಗೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಇವರ ಕಾರಣದಿಂದಾಗಿಯೇ ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಆಗಿಲ್ಲ. ಯಾವುದೇ ಉದ್ಯಮ ಪ್ರಾರಂಭವಾಗಿಲ್ಲ. ಇವೆಲ್ಲವೂ ಇದ್ದರೆ ಯುವಕರಿಗೆ ಉದ್ಯೋಗಾವಕಾಶವಾಗುತ್ತಿತ್ತು. ಪರಿಸರದ ಹೆಸರಿನಲ್ಲಿ ನ್ಯಾಯಾಲಯದ ಮೊರೆ ಹೋದರೆ ಯೋಜನೆಗಳು ಇನ್ನಷ್ಟು ವಿಳಂಬವಾಗಲಿವೆ. ಇದರಿಂದ ಯೋಜನಾ ವೆಚ್ಚವೂ ಹೆಚ್ಚಲಿದೆ. ಜಿಲ್ಲೆಯ ಬಗೆಗೆ ಇವರಿಗೆ ಇರುವ ಕಾಳಜಿಯಾದರೂ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.