ರಾಮನಗರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಾ ಕಾರ್ಯಕ್ರಮ ಮತ್ತು ನೋಸ್ಕಾಲ್ಪೆಲ್ ವ್ಯಾಸೆಕ್ಟಮಿ ಪಾಕ್ಷಿಕ-2020ಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಶುಕ್ರವಾರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಜಿಲ್ಲೆಯಾದ್ಯಂತ ಡಿ. 1 ರಿಂದ ಡಿ.30ರ ವರೆಗೆ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿರುವ ಪ್ರತಿ ಮನೆ ಮನೆಗಳಿಗೂ ಭೇಟಿ ನೀಡಿ ಕ್ಷಯ ರೋಗ ಪ್ರಕರಣ ಪತ್ತೆ ಹಚ್ಚಲು ಒತ್ತು ನೀಡಲಾಗುವುದು. ಈ ವೇಳೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಎಸ್.ನಿರಂಜನ್ ಮಾತನಾಡಿ,ಜಿಲ್ಲೆಯಾದ್ಯಂತ ಇದುವರೆಗೂ 7550ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇವರುಗಳ ಪೈಕಿ ತೀವ್ರ ಸ್ವರೂಪದ ಉಸಿರಾಟದ ಸಮಸ್ಯೆ ಅಥವಾ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿರುವವರಲ್ಲಿ ಮುಂದಿನ ಒಂದು ವರ್ಷದಲ್ಲಿ ಕ್ಷಯ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಇಂತಹವರು ತಪ್ಪದೆ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು.
ಪುರುಷರು ಸಹ ಕುಟುಂಬ ಯೋಜನೆಗಳಾದ ಪುರುಷ ಸಂತಾನಹರಣ ಶಕ್ತಿ ಶಸ್ತ್ರಚಿಕಿತೆ ಇಲ್ಲವೆ ನೋಸ್ಕಾಲ್ಪೆಲ್ ವ್ಯಾಸೆಕ್ಟಮಿ ಅಥವಾ ನಿರೋಧ್ ಬಳಕೆಯ ಮೂಲಕ ಅನಗತ್ಯ ಗರ್ಭಧಾರಣೆ ತಡೆಯುವುದರ ಬಗ್ಗೆ ಅರಿವು ಮೂಡಿಸಲು ಡಿ. 4ರ ವರೆಗೆ ಜಿಲ್ಲೆಯಾದ್ಯಂತ ನೋಸ್ಕಾಲ್ಪೆಲ್ ವ್ಯಾಸೆಕ್ಟಮಿ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ ಎಂದು ಡಿಎಚ್ಒ ತಿಳಿಸಿದರು.