ಲಕ್ಷೆ್ಮೕಶ್ವರ: ತಾಲೂಕಿನ ರಾಮಗೇರಿ ಗ್ರಾಮದವರಾದ ಸಿಐಡಿ ಡಿವೈಎಸ್ಪಿ ಶಂಕರಗೌಡ ವೀರನಗೌಡ ಪಾಟೀಲ ಅವರು ಕೇಂದ್ರ ಗೃಹ ಸಚಿವರ ಪದಕಕ್ಕೆ ಭಾಜನರಾಗಿದ್ದಾರೆ.
ರಾಜ್ಯದ ಆರು ಪೊಲೀಸ್ ಅಧಿಕಾರಿಗಳು ಈ ಪದಕಕ್ಕೆ ಭಾಜನರಾಗಿದ್ದು ಈ ಪೈಕಿ ವೈಜ್ಞಾನಿಕ ಹಾಗೂ ಕ್ಷಿಪ್ರ ತನಿಖೆ ನಡೆಸಿದ ಡಿವೈಎಸ್ಪಿ ಶಂಕರಗೌಡ ವೀರನಗೌಡ ಪಾಟೀಲ ಅವರು ಕೂಡ ಒಬ್ಬರಾಗಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮದ ತನಿಖಾಧಿಕಾರಿಯೂ ಆಗಿರುವ ಶಂಕರಗೌಡ 2019ರಲ್ಲಿ ಸೇಡಂ ವೃತ್ತದ ಸಿಪಿಐ ಆಗಿದ್ದಾಗ ಚಿಂಚೋಳಿ ತಾಲೂಕಿನ ಯಾಕಾಪುರದಲ್ಲಿ ನಡೆದಿದ್ದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ರ್ತಾಕ ಅಂತ್ಯ ನೀಡಿದ್ದರು. ಎಫ್ಐಆರ್ ದಾಖಲಾದ 101 ದಿನಗಳಲ್ಲಿಯೇ ಆರೋಪಿ ಯಲ್ಲಪ್ಪ ಎಂಬಾತನಿಗೆ ಗಲ್ಲು ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೂರಕ ದಾಖಲೆಗಳನ್ನು ಸಂಗ್ರಹಿಸಿ ದೋಷಾರೂಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಶಂಕರರಗೌಡ ಅವರಿಗೆ ಕೇಂದ್ರ ಸರ್ಕಾರದ ಈ ಪದಕ ನೀಡಲಾಗಿದೆ.
ರಾಜ್ಯದಲ್ಲಿ ನಡೆದ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಕಿಂಗ್ಪಿನ್ ಆರ್.ಡಿ. ಪಾಟೀಲ, ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿದ ಸಿಐಡಿ ತಂಡದಲ್ಲಿ ಶಂಕರಗೌಡ ಪಾಟೀಲ ಇದ್ದರು.