ಹುಬ್ಬಳ್ಳಿ: ಕಳಸಾ -ಬಂಡೂರಿ ಮಹದಾಯಿ ಯೋಜನೆ ಜಾರಿಗಾಗಿ ಕಾಂಗ್ರೆಸ್ ಪಕ್ಷವು ದಶಕಗಳಿಂದ ಪ್ರಯತ್ನ ಮಾಡುತ್ತ ಬಂದಿದೆ. ಇದೀಗ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಯೋಜನೆ ಜಾರಿಗೆ ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗಿದೆ. ಈ ಸಂದರ್ಭದಲ್ಲಿ ಕೇವಲ ಡಿಪಿಆರ್ಗೆ ಒಪ್ಪಿಗೆ ನೀಡುವ ಮೂಲಕ ಜನರ ಕಣ್ಣೊರೆಸುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪರ ಕಾಳಜಿ ಇಲ್ಲದ ಬಿಜೆಪಿ ಸರ್ಕಾರ ಇದೀಗ ಚುನಾವಣೆ ಗಿಮಿಕ್ ಮಾಡುತ್ತಿದೆ. ಸಿಡಬ್ಲೂಸಿಯಿಂದ ಡಿಪಿಆರ್ಗೆ ಒಪ್ಪಿಗೆ ಸಿಗುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ವಿಜಯೋತ್ಸವಗಳನ್ನು ಆಚರಿಸಲಾಗುತ್ತಿದೆ. ಇದು ಯಾವ ಪುರುಷಾರ್ಥಕ್ಕಾಗಿ? ಎಂದು ಆಕ್ಷೇಪಿಸಿದರು.
ಬಿಜೆಪಿ ವಿಜಯೋತ್ಸವ ಆಚರಿಸುವುದಿದ್ದರೆ ಮೊದಲು ಯೋಜನೆ ಜಾರಿ ಮಾಡಲಿ, ಆ ನಂತರ ಉತ್ಸವ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ಈ ಮೊದಲಿನ ಡಿಪಿಆರ್ ಪ್ರಕಾರ 349 ಹೆಕ್ಟೇರ್ ಅರಣ್ಯ ನಾಶವಾಗುತ್ತದೆ ಎಂದು ಹೇಳಲಾಗಿತ್ತು. ಹೊಸ ಡಿಪಿಆರ್ನಲ್ಲಿ ಕೇವಲ 61 ಹೆಕ್ಟೇರ್ ಎನ್ನಲಾಗಿದೆ. ಆದರೂ, ಯೋಜನಾ ವೆಚ್ಚ ಹೆಚ್ಚಿಗೆ ತೋರಿಸಲಾಗಿದೆ. ಒಟ್ಟು ಅಂದಾಜು ವೆಚ್ಚದಲ್ಲೂ ವ್ಯತ್ಯಾಸವಾಗಿದೆ. ಒಟ್ಟಾರೆ ಜನರನ್ನು ತಪು್ಪ ದಾರಿಗೆ ಎಳೆದು ವಂಚಿಸುವ ಕೆಲವ ಮಾಡಲಾಗುತ್ತಿದೆ ಎಂದರು.
ಈ ಎಲ್ಲ ವಿಷಯಗಳನ್ನು ಇಟ್ಟುಕೊಂಡು ಜ. 2ರಂದು ನಗರದಲ್ಲಿ ಪ್ರತಿಭಟನೆ, ರ್ಯಾಲಿಗಳು ನಡೆಯಲಿವೆ. ಜನರಿಗೆ ವಾಸ್ತವ ತಿಳಿಸುವ ಕೆಲಸ ಮಾಡುತ್ತೇವೆ ಎಂದು ನೀರಲಕೇರಿ ತಿಳಿಸಿದರು.
ಪಕ್ಷದ ಮುಖಂಡರಾದ ಸಿದ್ದಣ್ಣ ಕಂಬಾರ, ವಿರುಪಾಕ್ಷಪ್ಪ ಕೊಂಗವಾಡ ಗೋಷ್ಠಿಯಲ್ಲಿದ್ದರು.