ಹುಬ್ಬಳ್ಳಿ: ವಿದ್ಯಾನಗರ ಅಕ್ಷಯ ಕಾಲನಿ ಇಪಿಎಸ್ ಮೋಟಾರ್ಸ್ ಬಳಿ ಟೆಂಡರ್ ಶ್ಯೂರ್ ರಸ್ತೆಯ ಫುಟ್ಪಾತ್ಅನ್ನು ಅತಿಕ್ರಮಿಸಿ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಇದು ತಮ್ಮ ಗಮನಕ್ಕೆ ಬಂದಿಲ್ಲವೆಂಬಂತೆ ಪಾಲಿಕೆ ವಲಯ ಕಚೇರಿ (ನಂ. 5) ಅಧಿಕಾರಿಗಳು ಇದ್ದಾರೆ.
ಇದು ವಾಣಿಜ್ಯ ಕಟ್ಟಡ. ಇನ್ನೂ ನಿರ್ಮಾಣ ಹಂತದಲ್ಲಿದೆ. ಈಗಾಗಲೇ ‘ಈ ಕಟ್ಟಡ ಬಾಡಿಗೆಗೆ ಇದೆ’ ಎಂದು ಬೋರ್ಡ್ ಹಾಕಲಾಗಿದೆ. ಫುಟ್ಪಾತ್ಗೆ ಹೊಂದಿಕೊಂಡೇ ಕಟ್ಟಡದ ಗೋಡೆ ಎದ್ದು ನಿಂತಿವೆ. ಆದರೆ, ಲೋಪ ಇದಲ್ಲ. ಕಟ್ಟಡದ ಕೆಳ ಮೆಟ್ಟಿಲು ಎತ್ತರವಾಗದಂತೆ ಮಾಡಿರುವ ನಿರ್ವಣವು ಫುಟ್ಪಾತ್ ಅನ್ನು ಅತಿಕ್ರಮಿಸಿದೆ. ಸುಮಾರು 8 ಅಡಿ ಅಗಲ ಹಾಗೂ 60 ಅಡಿ ಉದ್ದಕ್ಕೆ ಫುಟ್ಪಾತ್ ಅತಿಕ್ರಮಿಸಿ 1 ಅಡಿ ಎತ್ತರದಷ್ಟು ಕಟ್ಟೆ ನಿರ್ಮಾಣ ಮಾಡಲಾಗಿದೆ.
ರಸ್ತೆ ಬದಿ ಫುಟ್ಪಾತ್ ಜತೆ ಸೈಕಲ್ ಪಾತ್ ನಿರ್ಮಾಣ ಮಾಡಿರುವುದು ಟೆಂಡರ್ ಶ್ಯೂರ್ ರಸ್ತೆಯ ವಿಶೇಷತೆ. ಆದರೆ, ಇಲ್ಲಿ ಸೈಕಲ್ ಪಾತ್ ಕಾಣಲು ಸಿಗುವುದಿಲ್ಲ. ಸೈಕಲ್ಪಾತ್ ಅನ್ನು ಮಾಯ ಮಾಡಿ ಫುಟ್ಪಾತ್ ಅನ್ನು ಅರ್ಧದಷ್ಟು ಅತಿಕ್ರಮಿಸಲಾಗಿದೆ. ಇಷ್ಟು ನಿರ್ವಣಕ್ಕೆ ಸುಮಾರು 15-20 ದಿನಗಳೇ ಬೇಕಾಗಿರುತ್ತದೆ. ಹೀಗೆ ರಾಜಾರೋಷವಾಗಿ ನಿರ್ಮಾಣ ಮಾಡಿದರೂ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೆಂಬುದು
ಅಚ್ಚರಿಯ ಸಂಗತಿ. ‘ಅಕ್ಷಯ ಕಾಲನಿಯಲ್ಲಿ ಫುಟ್ಪಾತ್ ಅತಿಕ್ರಮಿಸಿರುವುದು ಗಮನಕ್ಕೆ ಬಂದಿಲ್ಲ. ಕಟ್ಟಡ ನಿರ್ವಣಕ್ಕೆ ಯೋಜನಾ ಶಾಖೆ (ಡಿಡಿಟಿಪಿ)ಯಿಂದ ಪರವಾನಗಿ ನೀಡಲಾಗಿರುತ್ತದೆ. ಈ ಬಗ್ಗೆ ಪರಿಶೀಲಿಸಿ ಅತಿಕ್ರಮಣ ಕಂಡು ಬಂದಲ್ಲಿ ತೆರವುಗೊಳಿಸಲಾಗುವುದು’ ಎಂದು ಪಾಲಿಕೆ ವಲಯ ಅಧಿಕಾರಿ ಆನಂದಕುಮಾರ ಜಳಕಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ವಿದ್ಯಾನಗರದಿಂದ ಶಿರೂರ ಪಾರ್ಕ್-ಅಕ್ಷಯ ಕಾಲನಿ-ತೋಳನಕೆರೆವರೆಗೆ 40 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆ ನಿರ್ವಿುಸಲಾಗಿದೆ. ಇಲ್ಲಿ ನಿತ್ಯ ಒಂದಲ್ಲ ಒಂದು ಕಡೆ ಫುಟ್ಪಾತ್-ಸೈಕಲ್ ಪಾತ್ ಅತಿಕ್ರಮಿಸಿ ಕಟ್ಟಡ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗುತ್ತದೆ. ಸಂಜೆ ತಳ್ಳು ಗಾಡಿ ಅಂಗಡಿ ಅತಿಕ್ರಮಿಸುತ್ತವೆ. ಬೈಕ್-ಕಾರ್ ರ್ಪಾಂಗ್ ನಿತ್ಯವೂ ಇರುತ್ತದೆ. ಒಂದು ಮಾದರಿ ರಸ್ತೆಯನ್ನು ಈ ಮಟ್ಟಕ್ಕೆ ಹದಗೆಡಿಸಿದರೂ ಪಾಲಿಕೆ ಅಧಿಕಾರಿಗಳು-ಪೊಲೀಸರು ತಲೆ ಕೆಡಿಸಿಕೊಳ್ಳುತ್ತಿಲ್ಲ. ದೇಶಪಾಂಡೆ ನಗರದಲ್ಲಿ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವವರ ಮೇಲೆ ಪಾಲಿಕೆ ಅಧಿಕಾರಿಗಳು ಪೌರುಷ ತೋರಿಸುವುದು ಮಾತ್ರ ಸೋಜಿಗವಾಗಿದೆ..