ಮೈಸೂರು: ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ನಿಂದ ಜೂನ್ನಲ್ಲಿ ವಿಶ್ವ ಪರಿಸರ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ನಿರ್ಮಾಣಕಾರರ ಸಂಸ್ಥೆಯ ಮೈಸೂರು ಶಾಖೆ ಅಧ್ಯಕ್ಷ ನಾಗರಾಜ್ ವಿ.ಭೈರಿ ತಿಳಿಸಿದರು.
ಈ ವರ್ಷ ‘ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು’ ಎನ್ನುವ ಘೋಷವಾಕ್ಯದೊಂದಿಗೆ ಪರಿಸರ ದಿನ ಆಚರಿಸಲಾಗುತ್ತಿದೆ. ಜೂ.1ರಂದು ಸಂಜೆ 6.30ಕ್ಕೆ ವಿಶ್ವೇಶ್ವರನಗರದಲ್ಲಿರುವ ಮೈಸೂರು ಬಿಲ್ಡರ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂ.5ರಂದು ನಗರದ ಸುತ್ತಮುತ್ತ ಹಲವು ಬಡಾವಣೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ, ಜೂ.10 ಮತ್ತು 11ರಂದು ನಂಜರಾಜ್ ಬಹದ್ದೂರ್ ಸಭಾಂಗಣದಲ್ಲಿ ಪರಿಸರ ಸ್ನೇಹಿ ವಸ್ತುಗಳ ಎಕ್ಸ್ಪೋ, 11ರಂದು ಬಡಾವಣೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಗಿಡ ನೆಡುವ ಕಾರ್ಯಕ್ರಮ, 13ರಂದು ಸಂಸ್ಥೆ ಸಭಾಂಗಣದಲ್ಲಿ ಗೃಹಿಣಿಯರಿಗೆ ಅಡುಗೆ ಮನೆ ಹಾಗೂ ಪರಿಸರ ಸ್ನೇಹಿ ಗೃಹಬಳಕೆ ಸಾಮಗ್ರಿಗಳ ಉಪಯೋಗದ ಬಗ್ಗೆ ಮಾಹಿತಿ ಕಾರ್ಯಾಗಾರ, 17ರಂದು ಸೈಕ್ಲೋಥಾನ್, 21ರಂದು ಬೆಳಗ್ಗೆ ಯೋಗ ದಿನ, 24 ರಂದು ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಜೂ.25 ರಂದು ಸಂಸ್ಥೆ ಆವರಣದಲ್ಲಿ ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಚಿತ್ರ ಬಿಡಿಸುವ ಮತ್ತು ಬಣ್ಣ ಹಚ್ಚುವ ಸ್ಪರ್ಧೆ, ಜೂ.29 ರಂದು ಮಡಿಕೇರಿಯಲ್ಲಿರುವ ಕೋಟೆಬೆಟ್ಟಕ್ಕೆ ಚಾರಣ ಕಾರ್ಯಕ್ರಮ, ಜೂ.30 ರಂದು ಪರಿಸರ ಮಾಸಾಚರಣೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಟ್ರಸ್ಟ್ನ ಪದಾಧಿಕಾರಿಗಳಾದ ಯೋಗಾನರಸಿಂಹ, ವಿ.ಗುರುದತ್, ಬಾಲಾಜಿ, ಶ್ರೀನಾಥ್ ಇದ್ದರು.