ಶಿವರಾಜ ವಾಲಿ ಚಿಂಚೋಳಿ
ಮಿನಿ ಮಲೆನಾಡು ಎಂದೇ ಕರೆಯುವ ಕುಂಚಾವರಂ ಅರಣ್ಯ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಬಹುತೇಕ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇವುಗಳ ಮಧ್ಯೆ ಸಾರ್ವಜನಿಕರು ಡ್ಯಾಮ್ಗಳ ಗೇಟ್ ಬಳಿ ಜೀವ ಭಯವಿಲ್ಲದೆ ಮೀನು ಹಿಡಿಯುತ್ತಿರುವು ಆತಂಕ ಮೂಡಿಸಿದೆ.
ಚಂದ್ರಂಪಳ್ಳಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಕೆಲ ದಿನಗಳ ಹಿಂದೆ ನದಿಗೆ ನೀರು ಹರಿಸಲಾಗಿತ್ತು. ಇದೀಗ ಡ್ಯಾಂ ಗೇಟ್ ಮುಚ್ಚಿದ್ದು, ಇದರಿಂದ ಸಾರ್ವಜನಿಕರು ಗೇಟ್ ಮುಂಭಾಗದಲ್ಲಿನ ನೀರಿನಲ್ಲಿ ಮೀನುಗಳನ್ನು ಹಿಡಿಯಲು ಮುಗಿ ಬಿದ್ದಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಮೀನು ಹಿಡಿಯಲು ಹೋಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಆದರೆ ಇದ್ಯಾವುದರ ಬಗ್ಗೆ ಜನರಿಗೆ ಚಿಂತೆಯೇ ಇಲ್ಲ. ನಿತ್ಯವೂ ಸುಮಾರು 50ಕ್ಕೂ ಅಧಿಕ ಜನರು ಮೀನು ಹಿಡಿಯುವ ಕಾರ್ಯದಲ್ಲಿರುತ್ತಾರೆ.
ಜಲಾಶಯದ ಭದ್ರತೆಗಾಗಿ ಓರ್ವ ಗಾರ್ಡ್ ಅನ್ನು ನಿಯೋಜಿಸಿದ್ದು, ಆತನ ಮಾತು ಕೇಳುವವರಿಲ್ಲದಂತಾಗಿದೆ. ಸಾಕಷ್ಟು ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನದೆ ಗೇಟ್ ಮುಂದಿನ ನದಿಯಲ್ಲಿ ಇಳಿಯುತ್ತಿದ್ದಾರೆ. ನೀರಿಲ್ಲದಿದ್ದರೂ ದೊಡ್ಡ-ದೊಡ್ಡ ತಗ್ಗುಗಳಿವೆ. ನೀರು ನಿಂತಿರುವುದರಿಂದ ಆಳ ತಿಳಿಯುವುದಿಲ್ಲ. ಒಂದಿಷ್ಟು ಬ್ಯಾಲೆನ್ಸ್ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಸಾರ್ವಜನಿಕರು ಈಗಾಲದರೂ ಎಚ್ಚೆತ್ತುಕೊಳ್ಳಬೇಕು, ಅಪಾಯದ ಸ್ಥಳಗಳಿಂದ ದೂರವಿರಬೇಕು ಎಂಬುದು ಪ್ರವಾಸಿಗರು ಹಾಗೂ ಜಲಾಶಯದ ಅಧಿಕಾರಿಗಳ ಕಾಳಜಿಯಾಗಿದೆ.
ಚಂದ್ರಂಪಳ್ಳಿ ಜಲಾಶಯದ ಮುಖ್ಯ ಗೇಟ್ ಎದುರು ನಿಂತಿರುವ ನೀರಿನಲ್ಲಿ ಮೀನು ಹಿಡಿಯುವುದಕ್ಕಾಗಿ ನಿತ್ಯವೂ ಸಾಕಷ್ಟು ಜನರು ಬರುತ್ತಿದ್ದಾರೆ. ಇದು ಅಪಾಯಕಾರಿ ಸ್ಥಳವಾಗಿದ್ದು, ಸಾಕಷ್ಟು ಬಾರಿ ತಿಳಿಹೇಳಲಾಗಿದೆ. ಆದರೂ ಯಾರೂ ಮಾತು ಕೇಳುತ್ತಿಲ್ಲ. ಹೀಗಾಗಿ ಡ್ಯಾಂ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸುವಂತೆ ಚಿಂಚೋಳಿ ಠಾಣೆಗೆ ಅರ್ಜಿ ಸಲ್ಲಿಸಲಾಗಿದೆ.
| ಚೇತನ ಕಳಸ್ಕರ್ ಅಭಿಯಂತರ, ಚಂದ್ರಂಪಳ್ಳಿ ಜಲಾಶಯ