ಧಾರವಾಡ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 89,148 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಗಳು ಹಾನಿಯಾಗಿವೆ. ಹೆಸರು, ಉದ್ದು ಬೆಳೆಗಳ ಕೊಯ್ಲು ಸಾಧ್ಯವಾಗದೇ ರೈತರು ಸಂಕಷ್ಟದಲ್ಲಿದ್ದಾರೆ. ಸಮರ್ಪಕವಾಗಿ ಜಂಟಿ ಸಮೀಕ್ಷೆ ಕೈಗೊಂಡು ಹಾನಿಯ ನಿಖರ ಮಾಹಿತಿ ದಾಖಲಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ 89,000 ಹೆಕ್ಟೇರ್ ಕೃಷಿ ಬೆಳೆ ಹಾಗೂ 2,600 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿ ಆಗಿದೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಮಾನದಂಡಗಳ ಅನ್ವಯ ರೈತರ ಖಾತೆಗಳಿಗೆ ನೇರವಾಗಿ ಶೀಘ್ರವೇ ಪರಿಹಾರ ಪಾವತಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಳೆ ಹಾನಿ ಪರಿಶೀಲನಾ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 61,000 ಹೆಕ್ಟೇರ್ ಹೆಸರು ಬೆಳೆಗೆ ಹಾನಿ ಆಗಿದ್ದು, ಕಟಾವಿನ ಹಂತದಲ್ಲಿದ್ದ ಬೆಳೆ ಮೊಳಕೆ ಒಡೆದಿದೆ. ಆದ್ದರಿಂದ ಕೃಷಿ, ಕಂದಾಯ, ಇತರ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಈ ಹಿಂದೆ ಪ್ರತಿ ಹೆಕ್ಟೇರ್ಗೆ 6,800 ರೂ. ಇದ್ದ ಪರಿಹಾರವನ್ನು 13,600 ರೂ.ಗೆ ಏರಿಸಲಾಗಿದೆ. ಅಲ್ಲದೆ, ರೈತರ ನೆರವಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಾರ್ಷಿಕ 10,000 ರೂ.ಗಳನ್ನು ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ ಎಂದರು.
ಸದ್ಯಕ್ಕೆ ರೈತರ ಸಾಲ ಮನ್ನಾ ಮಾಡುವ ವಿಚಾರ ಇಲ್ಲ ಎಂದು ಸಚಿವ ಪಾಟೀಲ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.