ಸಿದ್ದಾಪುರ/ಹೊನ್ನಾವರ: ಜಿಲ್ಲೆಯಲ್ಲಿ ಶನಿವಾರ ಅಕಾಲಿಕ ಮಳೆ ಬಿದ್ದಿದ್ದು, ಜನತೆ ಸಂಕಟ ಪಡುವಂತಾಯಿತು. ಸಿದ್ದಾಪುರ ತಾಲೂಕಿನ ಕಾನಸೂರು ಸುತ್ತ ಮುತ್ತ ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಅಕಾಲಿಕ ಮಳೆಯಿಂದ ದ್ವಿಚಕ್ರವಾಹನ ಸವಾರರು ತೊಂದರೆ ಅನುಭವಿಸಿದರು.
ಹೊನ್ನಾವರ ತಾಲೂಕಿನ ವಿವಿಧೆಡೆ ಶನಿವಾರ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದು ಕಾದ ಇಳೆಗೆ ತಂಪು ಎರೆದಂತಾಯಿತು. ಅನೀರಿಕ್ಷಿತವಾಗಿ ಸುರಿದ ಮಳೆಯಿಂದ ಜನರು ಪರದಾಡುವಂತಾಯಿತು. ಸ್ವಲ್ಪ ಸಮಯದಲ್ಲೇ ಮಳೆ ನಿಂತು ಜನರು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡರು.
ಇಲ್ಲಿನ ಬಸ್ ನಿಲ್ದಾಣ ಕಾಮಗಾರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶಂಕು ಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಬೆಳಗ್ಗೆ 11-30 ಗಂಟೆಗೆ ನಿಗದಿಯಾಗಿ ಸಿದ್ದತೆಯನ್ನು ಮಾಡಲಾಗಿತ್ತು. ಅದೇ ಸಮಯದಲ್ಲಿ ಮಳೆ ಸುರಿಯಲಾರಂಭಿಸಿದ್ದು ಸಂಘಟಕರು ಕಂಗಾಲಾಗಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು, ನೆರೆದ ಜನರ ಮೇಲೆ ಮಳೆಯ ಸಿಂಚನವಾಯಿತು. ಮಳೆ ನಿಂತ ಮೇಲೆ ಉಪಮುಖ್ಯಮಂತ್ರಿಗಳ ಆಗಮನವಾಗಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಶಿರಸಿ ತಾಲೂಕಿನ ಸೋಂದಾ ಮತ್ತು ಕಾಣಗೋಡ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಾಗಿದೆ.