ಧಾರವಾಡ: ಜಿಲ್ಲೆಯಲ್ಲಿ ಕರೊನಾ ಸೋಂಕು ಕೊಂಚ ಇಳಿಕೆಯಾಗುತ್ತಿದೆ. ಆರಂಭದಲ್ಲಿ ಶೇ.15ರಷ್ಟು ಪ್ರಕರಣಗಳು ಗ್ರಾಮೀಣ ಭಾಗದಲ್ಲಿದ್ದವು. ಇದೀಗ ಕರೊನಾ ಮುಕ್ತ ಗ್ರಾಮ ಅಭಿಯಾನವನ್ನು ಗ್ರಾಮದ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಯಶಸ್ವಿಗೊಳಿಸುವುದು ಕೋವಿಡ್ ಕಾರ್ಯಪಡೆ ಸದಸ್ಯರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ. ಬಿ.ಸುಶೀಲಾ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಹಸೀಲ್ದಾರ್, ತಾಪಂ ಇಒ, ಪಿಡಿಒ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಬುಧವಾರ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಜನರು ನಿಯಮ ಪಾಲನೆ ಯಲ್ಲಿ ನಿರ್ಲಕ್ಷ್ಯ ಹಾಗೂ ಉದಾಸೀನತೆ ತೋರುತ್ತಿರು ವುದು ಕಂಡುಬರುತ್ತಿದೆ. ಜಿಪಂನಿಂದ ಪ್ರತಿ ಗ್ರಾಪಂನಲ್ಲಿ ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆ ರಚಿಸಿ ಜಾಗೃತಿ, ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಿಪಂ ಸಿಇಒ ಡಾ. ಬಿ. ಸುಶೀಲಾ ಮಾತನಾಡಿ, ಹಳ್ಳಿಗೇರಿ, ಕವಲಗೇರಿ ಹಾಗೂ ಕಲಘಟಗಿ ತಾಲೂಕಿನ ಗಂಜಿಗಟ್ಟಿ, ಸೂಳಿಕಟ್ಟಿ, ಸಂಗಮೇಶ್ವರ ಗ್ರಾಮಗಳಲ್ಲಿ ಇಂದಿನಿಂದಲೇ ಸ್ವಲಾಕ್ಡೌನ್, ಕಂಟೇನ್ಮೆಂಟ್ ಜೋನ್ಗಳನ್ನು ಜಾರಿ ಗೊಳಿಸಿ ಗ್ರಾಪಂಗಳು ಠರಾವು ಮಾಡಿವೆ ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ರುದ್ರೇಶ, ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ. ಬಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ತಹಸೀಲ್ದಾರರಾದ ಸಂತೋಷ ಬಿರಾದಾರ, ಅಮರೇಶ ಪಮ್ಮಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ಅಶೋಕ ಶಿಗ್ಗಾಂವಿ, ಕೋಟ್ರೇಶ್ ಗಾಳಿ, ನವೀನ ಹುಲ್ಲೂರ, ಇತರರು ಇದ್ದರು.
ಜಿಲ್ಲಾಧಿಕಾರಿ ಹೇಳಿದ್ದೇನು?
ಪರಸ್ಪರ ಅಂತರ ಕಾಪಾಡದಿರುವ ಮದ್ಯದಂಗಡಿ ವಿರುದ್ಧ ಫೋಟೋ, ವಿಡಿಯೋ ಸಮೇತ ದೂರು ನೀಡಿದರೆ ಲಿಕ್ಕರ್ ಅಂಗಡಿ ಸೀಜ್.
ಹೋಂ ಐಸೋಲೇಷನ್ ಆಗಿರುವವರು ಕಣ್ಣು ತಪ್ಪಿಸಿ ಓಡಾಡುವವರ ಕೈಗೆ ಟ್ಯಾಗ್ ಅಥವಾ ಸೀಲ್ ಹಾಕಲು ತೀರ್ವನಿಸಬಹುದು. ಠರಾವುಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ, ಅನುಮತಿ ಪಡೆಯಬಹುದು.
ಕರೊನಾ ಮುಕ್ತ ಗ್ರಾಮ ಅಭಿಯಾನ ಯಶಸ್ವಿಗೊಳಿಸುವ ಗ್ರಾಪಂಗಳಿಗೆ ಜಿಲ್ಲಾಡಳಿತದಿಂದ ಪ್ರಶಂಸನಾ ಪತ್ರ ಹಾಗೂ ಬಹುಮಾನ.
ಅಧಿಕಾರಿ ಮತ್ತು ಪಂಚಾಯಿತಿ ಸದಸ್ಯರಿಗೆ ಜಿಪಂ, ಜಿಲ್ಲಾಡಳಿತದಿಂದ ಗೌರವ ಪ್ರದಾನ.