More

    ಜಾನುವಾರುಗಳಿಗೆ ಶೀಘ್ರ ವಿಮೆ

    ಶಿರಸಿ: ಹಾಲು ನೀಡುವ ಜಾನುವಾರುಗಳ ಅಕಾಲಿಕ ಮರಣದಿಂದ ಹೈನುಗಾರರಿಗೆ ಆಗುವ ನಷ್ಟ ತಪ್ಪಿಸಲು ಧಾರವಾಡ ಹಾಲು ಒಕ್ಕೂಟವು ಜಾನುವಾರು ವಿಮೆ (ಕ್ಯಾಟಲ್ ಇನ್ಶೂರೆನ್ಸ್) ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹೈನುಗಾರರಿಗೆ ಸರ್ಕಾರ ನೀಡುತ್ತಿರುವ ಹೆಚ್ಚುವರಿ ಪೋ›ತ್ಸಾಹ ಧನದಲ್ಲಿ ಪ್ರತಿ ಲೀಟರ್ ಹಾಲಿಗೆ 40 ಪೈಸೆಯಂತೆ 1.25 ಕೋಟಿ ರೂ. ಸಂಗ್ರಹಿಸಿದೆ.

    ಮೂರ್ನಾಲ್ಕು ತಿಂಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಡೇರಿಗೆ ಮಾರಾಟ ಮಾಡಿದ ಹಾಲಿಗೆ ನೀಡುವ ಹೆಚ್ಚುವರಿ ಸಹಾಯಧನದ ಜತೆಗೆ 2 ರೂಪಾಯಿ ಹೆಚ್ಚಿಗೆ ನೀಡುವುದಾಗಿ ಘೊಷಿಸಿದ್ದರು. ಜತೆಗೆ, ಇದರಲ್ಲಿ 40 ಪೈಸೆಯನ್ನು ಜಾನುವಾರುಗಳ ವಿಮೆಗಾಗಿ ಬಳಸುವಂತೆ ರಾಜ್ಯದ ಎಲ್ಲ ಒಕ್ಕೂಟಗಳಿಗೂ ಸೂಚಿಸಿದ್ದರು. ಅದರಂತೆ ಉತ್ತರ ಕನ್ನಡ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳನ್ನು ಒಳಗೊಂಡ ಧಾರವಾಡ ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ 40 ಪೈಸೆಯಂತೆ ಸಂಗ್ರಹಿಸಿ ಇದೀಗ ಜಾನುವಾರುಗಳಿಗೆ ವಿಮೆ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ.

    ಶೇ. 50 ರೈತರು, ಶೇ. 50 ಒಕ್ಕೂಟ: ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ನಿತ್ಯ 2.20 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದರಲ್ಲಿ 85 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ಹೀಗೆ, ಮಾರಾಟವಾಗುವ ಪ್ರತಿ ಲೀಟರ್​ಗೆ ಸಿಗುವ 2 ರೂಪಾಯಿ ಹೆಚ್ಚುವರಿ ಪೋ›ತ್ಸಾಹ ಧನದಲ್ಲಿ 40 ಪೈಸೆಯನ್ನು ಜಾನುವಾರು ವಿಮೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಈ ಮೊತ್ತ 1.25 ಕೋಟಿ ರೂ. ಆಗಿದ್ದು, ಒಕ್ಕೂಟದ ಅಧೀನದಲ್ಲಿದೆ. ವಿಮೆಗಾಗಿ ವಿನಿಯೋಗಿಸಲು ರೂಪುರೇಷೆ ಅಂತಿಮವಾಗಿದೆ. ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ವಿಮಾ ಗುತ್ತಿಗೆ ಪಡೆದಿದೆ. ಹಾಲು ನೀಡುವ ಜಾನುವಾರಿನ ಮಾರುಕಟ್ಟೆ ದರ ಆಧರಿಸಿ ಪ್ರೀಮಿಯಂ ಮೊತ್ತ ನಿಗದಿಯಾಗಲಿದೆ. ಪ್ರೀಮಿಯಂ ಮೊತ್ತದಲ್ಲಿ ಶೇ. 50ರಷ್ಟು ರೈತರು ತುಂಬಿದರೆ ಉಳಿದರ್ಧ ಮೊತ್ತವನ್ನು ಒಕ್ಕೂಟ ಭರಿಸಲಿದೆ. ವಿಮೆಗೆ ಒಳಗಾದ ಜಾನುವಾರು ಅಕಾಲಿಕವಾಗಿ ಮರಣ ಹೊಂದಿದರೆ, ಆ ಜಾನುವಾರಿನ ಮಾರುಕಟ್ಟೆ ಮೊತ್ತವನ್ನು ಕಂಪನಿ ಹೈನುಗಾರರಿಗೆ ನೀಡುತ್ತದೆ. ಇದರಿಂದ ಹೈನುಗಾರರು ಸಾಲದ ಕೂಪಕ್ಕೆ ಬೀಳುವ ಆತಂಕ ದೂರವಾಗಲಿದೆ ಎಂಬುದು ಒಕ್ಕೂಟದ ಪ್ರಮುಖರ ಅಭಿಪ್ರಾಯ.

    ಮೂರು ವರ್ಷಗಳ ವಿಮೆ: ವಿಮಾ ಯೋಜನೆಯ ಆರಂಭಿಕ ಹಂತದಲ್ಲಿ ಪ್ರತಿ ಜಿಲ್ಲೆಗೆ 6,250 ನಂತೆ ಒಟ್ಟು 25 ಸಾವಿರ ಜಾನುವಾರುಗಳುಗಳ ವಿಮಾ ಕಂತನ್ನು ಪಡೆಯಲಾಗುತ್ತದೆ. ಮೂರು ವರ್ಷಗಳ ಅವಧಿಯ ವಿಮೆ ಇದಾಗಿದ್ದು, ರೈತರು 3 ವರ್ಷಗಳಿಗೊಮ್ಮೆ ವಿಮೆ ಮೊತ್ತ ತುಂಬಿದರೆ ಉಳಿದ ಹೆಚ್ಚುವರಿ ಪೋ›ತ್ಸಾಹ ಧನ ರೈತರ ಖಾತೆಗೆ ಜಮಾ ಆಗಲಿದೆ. ಈಗಾಗಲೇ ಪ್ರತಿ ಡೇರಿ ವ್ಯಾಪ್ತಿಯಲ್ಲಿ ವಿಮೆಯ ಸಮಗ್ರ ಮಾಹಿತಿ ಲಭಿಸಲಿದೆ ಎಂದು ಒಕ್ಕೂಟದ ಅಧಿಕಾರಿಗಳು ಮಾಹಿತಿ ನೀಡಿದರು.

    ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿರುವ ಎಲ್ಲ ಜಾನುವಾರುಗಳನ್ನು ಗುರುತಿಸುವ ಸಂಬಂಧ ಪ್ರತಿ ಡೇರಿ ವ್ಯಾಪ್ತಿಯಲ್ಲಿ ಬೇಂಚ್ ಮಾರ್ಕ್ ಸರ್ವೆ ಕಾರ್ಯ ಆರಂಭಿಸಲಾಗಿದೆ. ಸರ್ವೆ ಪೂರ್ಣಗೊಂಡು ಜಾನುವಾರುಗಳ ಲೆಕ್ಕ ಸಿಕ್ಕ ನಂತರ ಭವಿಷ್ಯದಲ್ಲಿ ಈ ಯೋಜನೆಯನ್ನು ಎಲ್ಲ ಜಾನುವಾರುಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.
    | ಬಸವರಾಜ ಅರಬಗೊಂಡ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ

    ಬಹುತೇಕ ಹೈನುಗಾರರು ಸಾಲ ಮಾಡಿ ಹೈನೋದ್ಯಮ ಮಾಡುತ್ತಿದ್ದಾರೆ. ಒಂದೊಮ್ಮೆ ಜಾನುವಾರುಗಳು ಅಕಾಲಿಕವಾಗಿ ನಿಧನವಾದರೆ ಸಾಲ ತೀರಿಸಲೂ ಹೆಣಗಾಡುವ ಸ್ಥಿತಿ ಎದುರಿಸಬೇಕಾಗುತ್ತದೆ. ಇಂತಹ ದುಬಾರಿ ಕಾಲಘಟ್ಟದಲ್ಲಿ ಜಾನುವಾರು ವಿಮೆ ತೀರಾ ಅಗತ್ಯ ಹಾಗೂ ಅನಿವಾರ್ಯ. ಡೇರಿಗೆ ಹಾಲು ಹಾಕುವ ಪ್ರತಿಯೊಬ್ಬ ಹೈನುಗಾರರೂ ತಮ್ಮ ಜಾನುವಾರುಗಳಿಗೆ ಈ ವಿಮೆ ಮಾಡಿಸುವುದು ಅವಶ್ಯಕ.
    | ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಕೆ.ಎಂ.ಎಫ್. ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts