More

    ಜಾತಿ ಭೇದ-ಭಾವ ಮಾಡಲ್ಲ

    ಲಕ್ಷ್ಮೇಶ್ವರ: ‘ಕ್ಷೌರ ಅಂಗಡಿಗಳು ಮತ್ತು ಹೋಟೆಲ್​ಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಸಮಾನ ಅವಕಾಶ ನೀಡಲಾಗುವುದು. ಇನ್ಮುಂದೆ ಜಾತಿ ಭೇದ-ಭಾವ ಮಾಡದೆ ಪರಸ್ಪರ ಸಮಾನತೆ ಹಾಗೂ ಸಹೋದರತೆಯಿಂದ ಬಾಳುತ್ತೇವೆ…’

    ಇದು ತಾಲೂಕಿನ ದೊಡ್ಡೂರ ಗ್ರಾಮದ ದೇವಿ ದೇವಸ್ಥಾನದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ವ್ಯಕ್ತವಾದ ಗ್ರಾಮಸ್ಥರ ಅಭಿಪ್ರಾಯ.

    ಗ್ರಾಮದಲ್ಲಿ ಎಸ್​ಸಿ ಜನಾಂಗದವರಿಗೆ ಹೋಟೆಲ್​ಗೆ ಪ್ರವೇಶವಿರಲಿಲ್ಲ, ಕ್ಷೌರ ಅಂಗಡಿಯಲ್ಲಿ ಅವಕಾಶ ನೀಡುತ್ತಿರಲಿಲ್ಲ. ಕೆಲವು ಯುವಕರು ಇದನ್ನು ಪ್ರಶ್ನಿಸಿದ್ದಕ್ಕೆ ಕೆಲವು ದಿನಗಳಿಂದ ಕ್ಷೌರ ಅಂಗಡಿಗಳನ್ನೇ ತೆರೆದಿರಲಿಲ್ಲ. ಈ ಕುರಿತು ವಿಜಯವಾಣಿ ಸೆ. 12ರಂದು ‘ದೊಡ್ಡೂರಲ್ಲಿ ಅಸ್ಪೃಶ್ಯತೆ ಜೀವಂತ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಗ್ರಾಮದಲ್ಲಿನ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಮಾಲೋಚನೆ ಸಭೆ ಕರೆದಿದ್ದರು.

    ಗ್ರಾಪಂ ಮಾಜಿ ಸದಸ್ಯ ದೇವಣ್ಣ ತೋಟದ, ಅಮರಪ್ಪ ಗುಡಗುಂಟಿ, ಗುಡ್ಡಪ್ಪ ಹಡಪದ ಮಾತನಾಡಿ, ‘ನಮ್ಮೂರಲ್ಲಿ ಧಾರ್ವಿುಕ, ಸಾಮಾಜಿಕ ಎಲ್ಲ ಕಾರ್ಯಕ್ರಮಗಳನ್ನು ಜಾತಿ, ಮತ ಭೇದ-ಭಾವ ಮಾಡದೆ ಎಲ್ಲರೂ ಸೇರಿ ಮಾಡುತ್ತ ಬರುತ್ತಿದ್ದೇವೆ. ಕ್ಷೌರ ಮತ್ತು ಹೋಟೆಲ್​ಗಳಲ್ಲಿ ಗೊತ್ತಿದ್ದೋ, ಇಲ್ಲದೆಯೋ ಕೆಲವೆಡೆ ಮಡಿವಂತಿಕೆ ಮುಂದುವರಿದಿತ್ತು. ಈ ಕುರಿತು ಇದುವರೆಗೂ ಆರೋಪ-ಪ್ರತ್ಯಾರೋಪ, ತಂಟೆ-ತಕರಾರು ಕೇಳಿ ಬಂದಿಲ್ಲ. ಈ ವಿಷಯವೀಗ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಅಧಿಕಾರಿಗಳು ಸೂಚನೆ ನೀಡಿದ್ದರಿಂದ ಎಲ್ಲರೂ ಎಚ್ಚೆತ್ತುಕೊಂಡಿದ್ದೇವೆ. ಇನ್ಮುಂದೆ ಗ್ರಾಮದಲ್ಲಿ ಯಾವುದೇ ತಾರತಮ್ಯ, ಭೇದ-ಭಾವಕ್ಕೆ ಅವಕಾಶ ಕೊಡದೆ ಎಲ್ಲರೂ ಅನ್ಯೋನ್ಯತೆಯಿಂದ ಬಾಳುತ್ತೇವೆ. ಏನಾದರೂ ಸಮಸ್ಯೆಗಳಿದ್ದರೆ ಅಧಿಕಾರಿಗಳು ಗ್ರಾಮದ ಹಿರಿಯರ ಗಮನಕ್ಕೆ ತಂದು ನಂತರ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದು ಮನವಿ ಮಾಡಿಕೊಡರು.

    ತಾಪಂ ಇಒ ಆರ್.ವೈ. ಗುರಿಕಾರ, ಪಿಎಸ್​ಐ ಶಿವಯೋಗಿ ಲೋಹಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಎಸ್. ಬೂದಿಹಾಳ ಮಾತನಾಡಿದರು. ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಪಿಡಿಒ ಎಸ್.ಕೆ. ವಾಲಿ, ಕಾರ್ಯದರ್ಶಿ ಎಸ್.ಎಫ್. ಹಳ್ಯಾಳ, ಸಿದ್ದಲಿಂಗಪ್ಪ ರಗಟಿ, ಮನೋಹರ ಕರ್ಜಗಿ, ರಮೇಶ ಗಡದವರ, ಕೋಟೆಪ್ಪ ನಂದೆಣ್ಣವರ, ಆನಂದ ಗಡದವರ, ಚಂದ್ರು ಭಜಕ್ಕನವರ, ಫಕಿರೇಶ ಬಂಕಾಪುರ, ಉಮೇಶ ಡೊಳ್ಳಿನ, ಹನುಮಂತಪ್ಪ ಛಬ್ಬಿ, ನಾನಪ್ಪ ಲಮಾಣಿ, ಗ್ರಾಮದ ಹಿರಿಯರು ಇದ್ದರು.

    ಎಲ್ಲ್ಲ ಸಹಕಾರ ಅಗತ್ಯತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಾತನಾಡಿ, ಸಮಾಜದಲ್ಲಿ ಇನ್ನೂ ಅಲ್ಲಲ್ಲಿ ಅಸ್ಪೃಶ್ಯತೆ ಕಂಡುಬರುತ್ತಿರುವುದು ಸಮಂಜಸವಲ್ಲ. ಹಿಂದುಳಿದ, ಗ್ರಾಮೀಣ ಪ್ರದೇಶಗಳಲ್ಲಿ ತೆರೆಮರೆಯಲ್ಲಿ ಉಳಿದ ಅಸ್ಪೃಶ್ಯತೆ ಮನೋಭಾವ ಹೋಗಬೇಕು. ಈ ನಿಟ್ಟಿನಲ್ಲಿ ವಿದ್ಯಾವಂತ ಯುವಕರು, ಅಧಿಕಾರಿಗಳು, ಮಾಧ್ಯಮಗಳ ಸಹಕಾರ ಅಗತ್ಯ. ದೊಡ್ಡೂರಲ್ಲಿನ ಈ ಗೊಂದಲವನ್ನು ಗ್ರಾಮಸ್ಥರೆಲ್ಲರೂ ಸೇರಿ ಸೌಹಾರ್ದದಿಂದ ಬಗೆಹರಿಸಿಕೊಂಡಿರುವುದು ಸಂತಸ ತಂದಿದೆ. ಇಂಥ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಬೇಕು ಎಂದರು. ನಂತರ ಗ್ರಾಮದಲ್ಲಿ ಬಂದ್ ಮಾಡಲಾಗಿದ್ದ ಕ್ಷೌರದ ಅಂಗಡಿಗಳನ್ನು ತೆರೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts