More

    ಜವಾಬ್ದಾರಿಯಿಂದ ಜನಗಣತಿ ಕಾರ್ಯ ನಿರ್ವಹಿಸಿ

    ಗದಗ: ಗಣತಿದಾರರು ಜನಗಣತಿ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಜಿಲ್ಲಾ ಜನಗಣತಿ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

    ಜಿಲ್ಲಾಡಳಿತ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು, ನಗರ, ಸ್ಥಳೀಯ ಸಂಸ್ಥೆಗಳ ಮಟ್ಟದ ಗಣತಿದಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಹಿಂದಿನ ಜನಗಣತಿ ಕಾರ್ಯಕ್ಕೆ ಹೋಲಿಸಿದಲ್ಲಿ ಈ ಬಾರಿಯ ಜನಗಣತಿ ವಿಧಾನ ಸರಳವಾಗಿದೆ. ಗಣತಿಗಾಗಿ ಅಭಿವೃದ್ಧಿಪಡಿಸಿದ ಆಪ್​ನಲ್ಲೇ ಎಲ್ಲ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಮತ್ತೊಮ್ಮೆ ದತ್ತಾಂಶ ಸೇರ್ಪಡೆ ಮಾಡುವ ಅಗತ್ಯವಿರುವುದಿಲ್ಲ ಎಂದರು.

    ನೇಮಕಗೊಂಡಿರುವ ಕ್ಷೇತ್ರ ತರಬೇತುದಾರರು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು. ತರಬೇತುದಾರರು ಐಚ್ಛಿಕ ಮತ್ತು ಕಡ್ಡಾಯವಾಗಿ ನಿರ್ವಹಿಸಬೇಕಾದ ಅಂಶಗಳ ಕುರಿತು ಪರಿಶೀಲಿಸಿ ಜನಗಣತಿ ಕಾರ್ಯ ಕೈಗೊಳ್ಳುವಂತೆ ಗಣತಿದಾರರನ್ನು ತರಬೇತುಗೊಳಿಸಬೇಕು. ಜನರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಬೇಕು ಮತ್ತು ಜನಗಣತಿ ಪೂರ್ವಭಾವಿ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಲು ಗಣತಿದಾರರನ್ನು ಸನ್ನದ್ಧಗೊಳಿಸಬೇಕು ಎಂದು ಹೇಳಿದರು.

    ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗದರ್ಶನದಲ್ಲಿ 2021ರ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ನಡೆಸುವುದು ಮಹತ್ವದ ಕರ್ತವ್ಯವಾಗಿದೆ ಎಂದರು.

    ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜನಗಣತಿ ನಿರ್ದೇಶನಾಲಯದ ಜಿಲ್ಲಾ ನೋಡಲ್ ಅಧಿಕಾರಿ ಜಾಹೀದ್ ಹುಸೇನ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ ಇದ್ದರು. ಮಾಸ್ಟರ್ ಟ್ರೇನರ್​ಗಳಾದ ಬಿ.ಜಿ. ಗಿರಿತಿಮ್ಮಣ್ಣವರ, ಶಿವಾನಂದ ಕಲ್ಲೂರ ತರಬೇತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts