ಆನೆಚೌಕೂರು ಬಳಿಯ ಹೆಬ್ಬಳ ಅರಣ್ಯ ವಲಯಕ್ಕೆ ಚಿರತೆ
ಕಂಪಲಾಪುರ: ಸಮೀಪದ ಜವನಿಕುಪ್ಪೆ ಗ್ರಾಮದಲ್ಲಿ ಗುರುವಾರ ಚಿರತೆ ಬೋನಿಗೆ ಬಿದ್ದಿದೆ.
ವಾರದ ಹಿಂದೆ ಗ್ರಾಮದ ಕಾಳೇಗೌಡ ಅವರ ಪುತ್ರ ಚಂದ್ರು ಎಂಬುವರಸಾಕುನಾಯಿ ಮತ್ತು ಕರುವನ್ನು ಚಿರತೆ ತಿಂದು ಹಾಕಿತ್ತು. ನಂತರ ನೆಟ್ಟೆಕೆರೆ ಬಳಿ ಒಂದು ಮೇಕೆಯನ್ನು ಬಲಿ ಪಡೆದಿತ್ತು. ರೈತ ಸಂಘದ ಚಂದ್ರು ಸೇರಿದಂತೆ ಹಲವರು ಈ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸೆ.20ರಂದು ಗ್ರಾಮದ ಗಿರಿಗೌಡ ಎಂಬುವರು ಹಸು, ಕರುವನ್ನು ಜಮೀನಿನ ಬಳಿ ಕಟ್ಟಿ ಹಾಕಿ ಮನೆಗೆ ಹಿಂದಿರುಗಿದ್ದರು. ಈ ವೇಳೆ ಚಿರತೆ ಕರುವನ್ನು ಕೊಂದು ಪೊದೆಯೊಳಗೆ ಬಿಟ್ಟು ಹೋಗಿತ್ತು. ಅಂದೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಬೋನು ಇಟ್ಟಿದ್ದರು.
ಗ್ರಾಮದ ಜಗದೀಶ್ ಅವರ ಸಾಕುನಾಯಿಯನ್ನು ಅಟ್ಟಸಿಕೊಂಡು ಹೋಗುತ್ತಿದ್ದುದ್ದನ್ನು ಗ್ರಾಮಸ್ಥರು ಗಮನಿಸಿದ್ದು, ಬಂದು ನೋಡಿದಾಗ ಚಿರತೆ ಬೋನಿನೊಳಗೆ ಸೆರೆಯಾಗಿತ್ತು. ನಂತರ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಪಿರಿಯಾಪಟ್ಟಣ ವಲಯದ ಆರ್ಎಫ್ಒ ಕಿರಣ್ಕುಮಾರ್, ಡಿಆರ್ಎಫ್ಒ ಪಾರ್ವತಿ, ಅರಣ್ಯ ರಕ್ಷಕರಾದ ಪೃಥ್ವಿ, ರಾಜು, ಸತೀಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಬಳಿಕ ಚಿರತೆಯನ್ನು ಆನೆಚೌಕೂರು ಬಳಿಯ ಹೆಬ್ಬಳ ಅರಣ್ಯ ವಲಯಕ್ಕೆ ಬಿಡಲಾಯಿತು.