ಕೆ.ಆರ್.ಪೇಟೆ: ಸಂತೇಬಾಚಹಳ್ಳಿ ಹೋಬಳಿ ಬಿ.ಗಂಗನಹಳ್ಳಿ ಗ್ರಾಮದ ರೈತ ಮರೀಗೌಡರ ಪುತ್ರ ಮಾಯಪ್ಪ(37) ಅವರ ಮೃತದೇಹ ಇತ್ತೀಚೆಗೆ ಕೊಳೆತ ಸ್ಥಿತಿಯಲ್ಲಿ ಕಾಡುಪ್ರಾಣಿ ತಿಂದಿರುವಂತೆ ಜಮೀನಿನ ಬಳಿ ಸಿಕ್ಕಿದೆ.
ಗಾರೆ ಕೆಲಸ ಮಾಡುತ್ತಿದ್ದ ಮಾಯಪ್ಪ, ಕೆಲಸಕ್ಕೆ ಹೋದರೆ ನಾಲ್ಕೈದು ದಿನ ಮನೆಗೆ ಹಿಂದಿರುಗುತ್ತಿರಲಿಲ್ಲ. ಜ.11ರಂದು ಪತಿ ರೇಖಾಗೆ ಹೇಳಿ ಕೆಲಸಕ್ಕೆ ತೆರಳಿದ್ದರು. ಕೆಲಸಕ್ಕೆ ಹೋಗುವಾಗ ಅಥವಾ ಬರುವಾಗ ಜಮೀನಿನಲ್ಲಿದ್ದ ತೆಂಗಿನ ಸಸಿಗಳಿಗೆ ನೀರು ಹಾಕಿ ಬರುತ್ತಿದ್ದರು. ಕೆಲಸ ಮುಗಿಸಿಕೊಂಡು ಜಮೀನಿನ ಬಳಿ ಹೋಗಿದ್ದಾಗ ಕಾಡುಪ್ರಾಣಿ ಕೊಂದುಹಾಕಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಜ.19 ರಂದು ಗ್ರಾಮಸ್ಥರಿಗೆ ಮೃತದೇಹ ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುತ್ತಮುತ್ತಲೂ ಅರಣ್ಯ ಪ್ರದೇಶವಿದ್ದು, ಚಿರತೆ ಹಾವಳಿ ಇದೆ. ಈ ಹಿಂದೆ ಸಾಕುಪ್ರಾಣಿಗಳನ್ನು ಹಲವು ಬಾರಿ ತಿಂದಿದೆ. ಈ ಕುರಿತು ಕಿಕ್ಕೇರಿ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಾರೆ.
ಪೊಲೀಸ್ ನಿರೀಕ್ಷಕ ಸುನೀಲ್ಕುಮಾರ್ ನೇತೃತ್ವದಲ್ಲಿ ಮಾರೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಶವವನ್ನು ಹಸ್ತಾಂತರಿಸಿದ್ದಾರೆ. ತಾಲೂಕು ವಲಯ ಅರಣ್ಯಾಧಿಕಾರಿ ಎಚ್.ಎಸ್ ಗಂಗಾಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.