ಜಮಖಂಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ ಕೆಆರ್ಎಸ್ ಪಕ್ಷದ ಮೂವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಾಲೂಕು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಆಸ್ಪತ್ರೆಯ ಆವರಣದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಅವರಿಗೆ ಮನವಿ ಸಲ್ಲಿಸಿದರು.
ಮುಖ್ಯವೈದ್ಯಾಧಿಕಾರಿ ಡಾ.ಕೃಷ್ಣಾ ಬಣ್ಣದ ಮಾತನಾಡಿ, ಆಸ್ಪತ್ರೆಯಲ್ಲಿ ಅನಾಥ ರೋಗಿಗಳು ಹಾಗೂ ಸಾರ್ವಜನಿಕರಿಗೆ ಯಾವುದೇ ಲೋಪ ಆಗದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಆರ್ಎಸ್ ಪಕ್ಷದವರು ಎಂದು ಹೇಳಿಕೊಂಡ ಮುತ್ತು ಮಹಿಷವಾಡಗಿ, ಸಾಗರ ಕುಂಬಾರ, ಶಿವಾನಂದ ಹೂಗಾರ ಇವರು ನಮ್ಮ ಆಸ್ಪತ್ರೆಯ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಜತೆಗೆ ದೌರ್ಜನ್ಯ ಎಸಗಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಿಬ್ಬಂದಿ ಕೊರತೆ ಇದ್ದರೂ ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ. ವಿನಾಕಾರಣ ಆಸ್ಪತ್ರೆಯಲ್ಲಿ ತೊಂದರೆ ಮಾಡಲು ಮುಂದಾಗಿದ್ದು ಸರಿಯಲ್ಲ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮಿಶಿ, ದಾನೇಶ ಘಾಟಗೆ, ಯಮನಪ್ಪ ಗುಣದಾಳ, ರಾಜೇಸಾಬ ಕಡಕೋಳ ಮಾತನಾಡಿದರು.
ಶ್ರೀನಾಥ ನವಣಿ, ಡಾ.ಸುನೀತಾ ಎಚ್.ಡಿ., ಡಾ.ರಶ್ಮಿ ಪಾಟೀಲ, ಡಾ.ವಿ.ಎಸ್.ಕಂದಗಲ್ಲ, ಡಾ.ಸುಧೀರ ಬೆನಕಟ್ಟಿ, ಡಾ.ಎಂ.ಎ.ದೇಸಾಯಿ, ಡಾ.ಶ್ರೀಶೈಲ ನಾಯಿಕ, ಡಾ.ಪವನ ಬಳ್ಳೂರ ಹಾಗೂ ದಲಿತಪರ ಹಾಗೂ ವಿವಿಧ ಸಂಘಟನೆ, ಪಕ್ಷದ ಪದಾಧಿಕಾರಿಗಳು ಇದ್ದರು.