ಶಿಕಾರಿಪುರ: ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಸವಲತ್ತುಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕಿನ ಹೊಸೂರು ಹೋಬಳಿಯ ವಿಠ್ಠಲ ನಗರ ಗ್ರಾಮದ ಅರ್ಹ ಪಲಾನುಭವಿಗಳಿಗೆ ಸೋಮವಾರ ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನದ ಆದೇಶದ ಪ್ರತಿಯನ್ನು ವಿತರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ದಶಕ ಅಭಿವೃದ್ಧಿಯ ದಶಕವಾಗಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಂಡಿದ್ದ ಕನಸು ನನಸಾಗಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಕಾಲದಲ್ಲಿ ಸವಲತ್ತುಗಳು ತಲುಪಬೇಕು. ಜನರನ್ನು ಅಧಿಕಾರಿಗಳನ್ನು ಅಲೆದಾಡಿಸಬಾರದು. ಜನತೆಯ ಮನೆ ಬಾಗಿಲಿಗೆ ಸರ್ಕಾರದ ಸವಲತ್ತುಗಳು ತಲುಪಬೇಕು. ಮಧ್ಯವರ್ತಿಗಳಿಂದ ಸವಲತ್ತುಗಳ ದುರುಪಯೋಗವಾಗದಂತೆ ಗಮನಹರಿಸಬೇಕು ಎಂದು ಹೇಳಿದರು.
ತುಂಗಭದ್ರಾ ನದಿಯಿಂದ ಏತನೀರಾವರಿ ಯೋಜನೆಯ ಮೂಲಕ ಕೆರೆ ತುಂಬಿಸುವ ಕಾರ್ಯ ನಡೆದಿದೆ. ಇದರಿಂದಾಗಿ ನಮ್ಮ ರೈತರಿಗೆ ಅನುಕೂಲವಾಗಿದೆ. ಬರಗಾಲದ ಸಮಯ ಬಂದರೂ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗುವದಿಲ್ಲ. ಅಂತರ್ಜಲ ಮಟ್ಟ ವೃದ್ಧಿಯಾಗುತ್ತಿದೆ. 25000ಕ್ಕೂ ಹೆಚ್ಚು ಬೋರ್ವೆಲ್ಗಳು ರೀಚಾರ್ಜ್ಗೊಂಡು ರೈತರಿಗೆ ಅನುಕೂಲವಾಗಲಿದೆ. ನೀರಾವರಿ ಯೋಜನೆಯ ಫಲವಾಗಿ ರೈತರು ಆರ್ಥಿಕ ಬೆಳೆಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಹೆಚ್ಚು ಹೆಚ್ಚು ತೋಟಗಳನ್ನು ಮಾಡುತ್ತಿದ್ದಾರೆ ಎಂದರು.