ಕಲಬುರಗಿ: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಹರಡುವಿಕೆ ತಡೆಗೆ ಜನರು ಸರ್ಕಾರ ಘೋಷಿಸಿರುವ ಲಾಕ್ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ. ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡರೂ ಸಾರ್ವಜನಿಕರು ಬೇಜವಾಬ್ದಾರಿಯಿಂದ ವರ್ತಿ ಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ಜನಾರೋಗ್ಯ ಕಾಪಾಡಲೆಂದೇ ಲಾಕ್ಡೌನ್ ಘೋಷಿಲಾಗಿದ್ದು, ಜಿಲ್ಲಾಡಳಿತ ನಿಷೇಧಾಜ್ಞೆಯೂ ಜಾರಿಗೊಳಿಸಿದೆ. ಮನೆಯಿಂದ ಯಾರೂ ಹೊರಬರಕೂಡದು, ಗುಂಪು ಸೇರಕೂಡದು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಮನೆಯಲ್ಲಿದ್ದರೂ ಸುರಕ್ಷಿತ ಅಂತರ ಕಾದುಕೊಳ್ಳಬೇಕು. ಇಲ್ಲವಾದರೆ ಸೋಂಕು ಹರಡಿ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೋಮ್ ಕ್ವಾರಂಟೈನ್ನಲ್ಲಿ ಇದ್ದವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬಾರದು. ನಿರ್ಲಕ್ಷಿಸಿದರೆ ಕೇಸ್ ದಾಖಲಿಸಬೇಕಾಗುತ್ತದೆ. ಈಗಾಗಲೇ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಿಮೆಂಟ್ ಫ್ಯಾಕ್ಟರಿ ಮುಚ್ಚಲು ಆದೇಶ
ಕರೊನಾ ತಡೆಗೆ ಜಿಲ್ಲೆಯ ಎಲ್ಲ ಸಿಮೆಂಟ್ ಫ್ಯಾಕ್ಟರಿಗಳನ್ನು ತಕ್ಷಣವೇ ಬಂದ್ ಮಾಡುವಂತೆ ಸೇಡಂ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಲಾಕ್ಡೌನ್ ಆದೇಶದಂತೆ ವಾಸವದತ್ತ, ಅಲ್ಟ್ರಾಟೆಕ್, ಸೌತ್ ಇಂಡಿಯಾ, ಶ್ರೀ, ಎಸಿಸಿ, ಓರಿಯಂಟಲ್, ವಿಕಟಸಾಗರ, ಚಟ್ಟಿನಾಡ್, ಜೆಪಿ, ಕಲಬುರಗಿ ಮೊದಲಾದ ಸಿಮೆಂಟ್ ಯೂನಿಟ್ಗಳ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ. ಎಲ್ಲ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಕಾರ್ಮಿಕರಿಗೆ ವೇತನಸಹಿತ ರಜೆ ನೀಡಬೇಕು. ಮುಂದಿನ ಆದೇಶದವರೆಗೂ ಫ್ಯಾಕ್ಟರಿಗಳನ್ನು ಆರಂಭಿಸಬಾರದು. ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಸೂಚಿಸಿದ್ದಾರೆ.