ಚಿತ್ರದುರ್ಗ:ಮಾರುಕಟ್ಟೆಯಲ್ಲಿ ದಿನ ಬಳಕೆ ವಸ್ತುಗಳ ಬೆಲೆಗಳು ಹೆಚ್ಚಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವ ಮೂಲಕ ಕಡಿಮೆ ದರದಲ್ಲಿ ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸಲು ಮುಂದಾಗಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಗಾಂಧಿ ಸರ್ಕಲ್ನಲ್ಲಿ ಸೋಮವಾರ ಭಾರತ ಅಕ್ಕಿ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿ, ಮಾರುಕಟ್ಟೆಯಲ್ಲಿ ಕೆಜಿಯೊಂದಕ್ಕೆ 60 ರೂ. ದರದಲ್ಲಿ ಮಾರಾಟವಾಗುವ ಅಕ್ಕಿಯನ್ನು ಕೇಂದ್ರ ಸರ್ಕಾರ ಖರೀದಿಸಿ, ಸಹಾಯಧನದಡಿ ಜನರಿಗೆ 29 ರೂ.ಗೆ ಮಾರಾಟ ಮಾಡುತ್ತಿದೆ ಎಂದರು.ಮುಂದಿನ ದಿನಗಳಲ್ಲಿ ಈರುಳ್ಳಿ, ಬೇಳೆ, ಗೋಧಿ ಮತ್ತಿತರ ಅಗತ್ಯ ದಿನಸಿ ವಸ್ತುಗಳನ್ನು ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ದುಬಾರಿ ದಿನಸಿ ಖರೀದಿಸುವ ಶಕ್ತಿ ಇಲ್ಲದ ಬಡವರಿಗೆಂದು ಕೇಂದ್ರ ಸರ್ಕಾರ ರೂಪಿಸಿರುವ ಈ ಯೋಜನೆಯ ಪ್ರಯೋಜನ ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.
ನಗರದ ಎಪಿಎಂಸಿ ತೋಂಟದಾರ್ಯ ಟ್ರೇಡರ್ಸ್ನಲ್ಲಿ, ಹತ್ತು ಕೆಜಿ ಅಕ್ಕಿ ಇರುವ ಒಂದು ಚೀಲಕ್ಕೆ 290 ರೂ. ದರದಲ್ಲಿ ಒಬ್ಬ ವ್ಯಕ್ತಿಗೆ ಗರಿಷ್ಠ 40 ಕೆಜಿ, ಮಾರಾಟ ಮಾಡಲಾಗುತ್ತದೆ. ಗ್ರಾಹಕರು ಖರೀದಿಗೆಂದು ಬರುವಾಗ ಮೊಬೈಲ್ ತರಬೇಕು. ಒಮ್ಮೆ ಅಕ್ಕಿ ಖರೀದಿಸಿದವರು ಮುಂದಿನ 40 ದಿನಗಳವರೆಗೆ ಮತ್ತೆ ಅಕ್ಕಿ ಖರೀದಿಸಲಾಗದು ಎಂದರು.
ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ರಾಮು, ಚಂದ್ರು, ತಿಪ್ಪೇಸ್ವಾಮಿ, ಶಂಭು, ಕಿರಣ್, ಕೃಷ್ಣ, ಚೇತನ್ ಮತ್ತಿತತರರು ಇದ್ದರು.