ಚಿತ್ರದುರ್ಗ: ಧರ್ಮ, ಜಾತಿಯಿಂದ ಪ್ರತಿಯೊಬ್ಬರು ಹೊರಬರಬೇಕಾದರೆ, ನೈತಿಕ ಶಿಕ್ಷಣದ ಅಗತ್ಯವಿದೆ. ಜಗತ್ತಿಗೆ ವಿಶ್ವಮಾನವ ಪ್ರೀತಿ ಹಂಚಲು ಕುವೆಂಪು ಆದರ್ಶ ಪಾಲಿಸಬೇಕಿದೆ ಎಂದು ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.
ಕುವೆಂಪು ಜನ್ಮದಿನದ ಅಂಗವಾಗಿ ವಿಜ್ಞಾನ ಕೇಂದ್ರದಿಂದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜಾತಿ ಎಂಬುದು ನೈಸರ್ಗಿಕವಲ್ಲ, ಸೃಷ್ಟಿ ಮಾಡಿಕೊಂಡಿರುವುದು. ಇದೊಂದು ಕೆಟ್ಟ ರೋಗವಿದ್ದಂತೆ. ಮನುಷ್ಯ ಕುಲ ಒಂದೇ ಎಂಬ ಭಾವನೆ ಎಲ್ಲರಲ್ಲೂ ಇರಬೇಕೆಂದು ಕುವೆಂಪು ವಿಶ್ವಕ್ಕೆ ಸಂದೇಶ ಸಾರಿದ್ದಾರೆ. ಆದ್ದರಿಂದ ಸಂಕುಚಿತವಾಗಿ ಬದುಕುವ ಬದಲು ವಿಶಾಲ ಮನೋಭಾವದಿಂದ ಜೀವಿಸೋಣ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಸ್ವಾಮಿ, ಉಪನ್ಯಾಸಕ ಡಾ.ಹೇಮಂತರಾಜ್, ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ, ಸದಸ್ಯ ಮನೋಹರ್, ಸಾಂಸ್ಕೃತಿಕ ಸಂಚಾಲಕ ಪ್ರೊ.ಎಲ್.ನಾಗರಾಜ್ ಇತರರಿದ್ದರು.