ಚಿತ್ತಾಪುರ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಗಿಣಾ ನದಿಗೆ ಪ್ರವಾಹ ಬಂದಿದ್ದು, ಮಂಗಳವಾರ ಬೆಳಗ್ಗೆ ದಂಡೋತಿ ಬಳಿಯ ಸೇತುವೆ ಮುಳುಗಡೆಯಾಗಿ ಮಧ್ಯಾಹ್ನದವರೆಗೆ ಸಂಚಾರ ಸ್ಥಗಿತಗೊಂಡಿತ್ತು.
ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಗ್ರಾಮಗಳ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಸಮಸ್ಯೆ ಅನುಭವಿಸುವಂತಾಯಿತು. ದಂಡೋತಿ ಬಳಿಯ ಸೇತುವೆ ಮೇಲೆ ಬೆಳಗ್ಗೆಯಿಂದಲೇ ಸಂಚಾರ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಶಾಲೆ-ಕಾಲೇಜು ವಿದ್ಯಾರ್ಥಿಗಳು, ಕಚೇರಿ ಕೆಲಸಗಳಿಗಾಗಿ ತಾಲೂಕು ಕೇಂದ್ರಕ್ಕೆ ಬರುವ ಜನ ಪರದಾಡುವಂತಾಯಿತು. ಕೆಲವರು ದೂರದ ಶಹಾಬಾದ್ ಮಾರ್ಗವಾಗಿ ಚಿತ್ತಾಪುರಕ್ಕೆ ಬಂದರು. ಮಧ್ಯಾಹ್ನದ ಬಳಿಕ ಪ್ರವಾಹ ತಗ್ಗಿದ್ದರಿಂದ ಸಂಚಾರ ಆರಂಭಿಸಲಾಯಿತು.
ಚಿತ್ತಾಪುರ, ಯರಗಲ್ನಲ್ಲಿ ತಲಾ ಒಂದು ಮನೆ ಕುಸಿದಿದೆ. ಚಿತ್ತಾಪುರದಲ್ಲಿ 17.3 ಮಿಮೀ, ಅಳ್ಳೋಳ್ಳಿ 52.4, ನಾಲವಾರ 17.4, ಗುಂಡಗುರ್ತಿಯಲ್ಲಿ 8.4 ಮಿಮೀ ಮಳೆ ಸುರಿದಿದೆ. ದಂಡೋತಿ ಗ್ರಾಮದ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಕೆಸರು ಮತ್ತು ನದಿ ನೀರು ಹೊರ ಹಾಕುವುದರಲ್ಲೇ ಜನರು ದಣಿದರು. ಬಟ್ಟೆ, ದವಸ- ಧಾನ್ಯ ನೀರುಪಾಲಾಗಿವೆ. ನದಿ ದಡದ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿ ಆತಂಕ ಎದುರಾಗಿದೆ.