ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಚಿಕ್ಕಬಾಗೇವಾಡಿ ರಸ್ತೆ ಪಕ್ಕದಲ್ಲಿ ಮಳೆನೀರು ಸರಾಗವಾಗಿ ಸಾಗಲು ಚರಂಡಿ ನಿರ್ಮಿಸದ್ದರಿಂದ ರಸ್ತೆ ಪಕ್ಕದ ಮನೆಯೊಂದರ ಮುಂದೆ ಮಳೆನೀರು ಸಂಗ್ರಹಗೊಂಡಿದೆ.
ಇತ್ತೀಚೆಗೆ ಎಂ.ಕೆ.ಹುಬ್ಬಳ್ಳಿ ಕಡೆಯಿಂದ ಚಿಕ್ಕಬಾಗೇವಾಡಿ ಸಾಗುವ ಮಾರ್ಗವನ್ನು ಡಾಂಬರೀಕರಣ ಮಾಡಲಾಗಿದೆ. ಆದರೆ, ನೀರು ಸಾಗಲು ರಸ್ತೆ ಪಕ್ಕ ಸರಿಯಾದ ಚರಂಡಿ ನಿರ್ಮಿಸದ್ದರಿಂದ ಮಳೆ ನೀರೆಲ್ಲ ಮನೆ ಮುಂದೆ ಸಂಗ್ರಹಗೊಳ್ಳುತ್ತಿದೆ. ಪರಿಣಾಮ ಮನೆಯಿಂದ ಹೊರಬಾರದಂತಾಗಿದೆ.
ಮಕ್ಕಳು ಶಾಲೆಗೆ ಹೋಗಲಾರದ ಸ್ಥಿತಿ ಎದುರಾಗಿದ್ದು, ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಹಾಗಾಗಿ, ತಕ್ಷಣ ನೀರು ಸಾಗಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ನಿವಾಸಿಗಳು ಮನವಿ ಮಾಡಿದ್ದಾರೆ.