ಅಥಣಿ ಗ್ರಾಮೀಣ, ಬೆಳಗಾವಿ: ಗ್ರಾಮ ಸಭೆಯಲ್ಲಿ ತಾಲೂಕುಮಟ್ಟದ ಕೇವಲ 4 ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದಕ್ಕೆ ಗ್ರಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ
ಘಟನೆ ಅಥಣಿ ತಾಲೂಕಿನ ಕೊಕಟನೂರ ಗ್ರಾಪಂನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ನಡೆಯಿತು.
ಎರಡು ವರ್ಷದಿಂದ ಗ್ರಾಮಸಭೆ ನಡೆಸಿರಲಿಲ್ಲ. ಸದ್ಯ ಗ್ರಾಮಸಭೆ ಆಯೋಜಿಸಿದ್ದು, ಇದರಲ್ಲಿ ಶಿಕ್ಷಣ, ಸಿಡಿಪಿಒ, ಸಮಾಜ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದಾರೆ. ಸರ್ಕಾರದ ವಿವಿಧ ಯೋಜನೆ ತಲುಪಿಸುವ ಅಧಿಕಾರಿಗಳು ಸಭೆಗೆ ಗೈರಾದರೆ ಗ್ರಾಮೀಣ ಭಾಗದ ಜನರಿಗೆ ಯೋಜನೆಗಳ ಮಾಹಿತಿ ನೀಡುವರು ಯಾರು? ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೋಡಲ್ ಅಧಿಕಾಯಾಗಿ ಪಾಲ್ಗೊಂಡಿದ್ದ ಶಿಕ್ಷಣ ಇಲಾಖೆಯ ಅನಿಲ ಮೇಲಿನಕೇರಿ ಇದಕ್ಕೆ ಪ್ರತಿಕ್ರಿಯಿಸಿ, ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
ಗ್ರಾಮದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣವಾಗುತ್ತಿದೆ. ಆದರೆ, ವೈದ್ಯರಿಲ್ಲ. ಇದರಿಂದ ಜಾನುವಾರುಗಳು ಅನಾರೋಗ್ಯದಿಂದ ಮೃತಪಡುತ್ತಿವೆ. ಹೀಗಾಗಿ ವೈದ್ಯರನ್ನು ನೇಮಿಸಬೇಕು ಎಂದು ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
2022-23ನೇ ಸಾಲಿನ ಬಸವ ವಸತಿ ಯೋಜನೆಯ 38 ಹಾಗೂ ಡಾ. ಅಂಬೇಡ್ಕರ್ ವಸತಿಯ 12 ಸೇರಿ ಒಟ್ಟು 50 ಮನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಜತೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾಯೋಜನೆ ತಯಾರಿಸಲಾಯಿತು. ಡಿ.18ರಿಂದ 24ರ ವರೆಗೆ ಜರುಗುವ ಯಲ್ಲಮ್ಮದೇವಿ ಜಾತ್ರೆಯ ಪೂರ್ವಸಿದ್ಧತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಗ್ರಾಪಂ ಅಧ್ಯಕ್ಷ ಬಾಳಾಸಾಬ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ದೀಪಾ ಕಾಡದೇವರಮಠ, ಡಾ. ಚಂದ್ರಕಾಂತ ಧೂಳಶೆಟ್ಟಿ, ಶ್ರೀದೇವಿ ಬರಡಿ, ಪಿಡಿಒ ಎಸ್.ಎಸ್.ತುಂಗಳ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ಸದಸ್ಯರಾದ ಶಿವಗೌಡ ನೇಮಗೌಡ, ಅರ್ಜುನ ಪೂಜಾರಿ, ಅನಿಲ ಮುಳಿಕ, ಜಾವೇದ್ ನದಾಫ್, ಮಲ್ಲಿಕಾರ್ಜುನ ಪರಾಂಡೆ, ಕುಮಾರ ವೀರಗೌಡ, ಪ್ರಶಾಂತ ಕಾಂಬಳೆ, ದೇವರಾಜ ದೇಸಾಯಿ, ಮಯೂರ ಹೊನವಾಡಕರ, ಪ್ರಲ್ಹಾದ ದಡ್ಡಿ, ರವಿ ದೊಡಮನಿ ಇತರರಿದ್ದರು.