ವಿಜಯಪುರ: ಗೋಂಧಳಿ ಸಮಾಜದವರಿಗೆ ಸೂರು ಹಾಗೂ ನಿಗಮದಿಂದ ಸಾಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಮಾಜದ ಮುಖಂಡರು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಗೋಂಧಳಿ ಸಮಾಜ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಂಘದ ಅಧ್ಯಕ್ಷ ಸುರೇಶ ಗರುಡಕರ ಮಾತನಾಡಿ, ಕಳೆದ 2018-19 ಹಾಗೂ 2019-20ನೇ ಸಾಲಿನಲ್ಲಿ ದೇವರಾಜ ಅರಸು ನಿಗಮದಿಂದ ನೇರ ಸಾಲ ಯೋಜನೆಯ ಸೌಲಭ್ಯ ಒದಗಿಸಬೇಕು. 2020-21ರಲ್ಲಿ ಕರೊನಾ ಮಹಾಮಾರಿಯಿಂದ, ನಿರುದ್ಯೋಗ ಸಮಸ್ಯೆಯಿಂದ ಹಾಗೂ ನೆರೆ ಹಾವಳಿಯಲ್ಲಿ ಸಿಲುಕಿ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಜನಾಂಗಕ್ಕೆ ನಿಗಮದಿಂದ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕು ಹಾಗೂ ವಸತಿ ಇಲಾಖೆಯಿಂದ ಸೂರು ವ್ಯವಸ್ಥೆ ನೀಡಬೇಕು. ಗೋಂಧಳಿ ಸಮುದಾಯವನ್ನು ಎಸ್.ಟಿ. ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಮೋಹನ ಸಿ. ಭಿಸೆ, ತುಳಸಿರಾಮ ಕಾಳೆ, ಯಲ್ಲಪ್ಪ ಘೋರ್ಪಡೆ, ಅಂಬಾದಾಸ ಗರುಡಕರ, ಜೀವನ ಕಾಳೆ, ಸುಹಾಸ ಸಿ. ಭಿಸೆ, ಸುರೇಶ ರಾ. ಭಿಸೆ, ಅನೀಲ ಭಿಸೆ ಮುಂತಾದವರು ಉಪಸ್ಥಿತರಿದ್ದರು.