ಶಿರಸಿ: ವಾರದಿಂದೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯ ಅತಿದೊಡ್ಡ ಕೆರೆ, ತಾಲೂಕಿನ ಗುಡ್ನಾಪುರ ಕೆರೆ ಭರ್ತಿಯಾಗಿದೆ. ಆದರೆ, ಪ್ರಸಿದ್ಧ ಬಂಗಾರೇಶ್ವರ ದೇವಾಲಯ ಜಲಾವೃತವಾಗಿದೆ.
ಅಂದಾಜು 160 ಎಕರೆ ಪ್ರದೇಶದ ಗುಡ್ನಾಪುರ ಕೆರೆ ಸಂಪೂರ್ಣ ತುಂಬಿದ್ದು, ಕೋಡಿ ಬೀಳುವ ಹಂತದಲ್ಲಿದೆ. ಇದರಿಂದಾಗಿ ಕೆರೆಯಂಚಿನಲ್ಲಿರುವ ಬಂಗಾರೇಶ್ವರ ದೇವಾಲಯ ಮುಳುಗಡೆಯಾಗಿದ್ದು, ದೇವಸ್ಥಾನದ ಆರಂಭದ ಮೆಟ್ಟಿಲುಗಳು ಮಾತ್ರ ಕಾಣುತ್ತಿವೆ. ದೇಗುಲ ಜಲಾವೃತವಾಗಿದ್ದರಿಂದ ನಿತ್ಯ ಪೂಜೆ ನಿಲ್ಲಿಸಲಾಗಿದೆ. ಆದರೂ ಹೊರ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ದೂರದಿಂದಲೇ ಕೈ ಮುಗಿದು ಮರಳುತ್ತಿದ್ದಾರೆ.
ಕಲಕರಡಿ ಕೆರೆಯ ಕೋಡಿ ಬಿದ್ದಿದ್ದು, ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ತಾಲೂಕಿನ ಶಾಲ್ಮಲಾ, ಅಘನಾಶಿನಿ, ವರದಾ ನದಿಗಳು ಮೈದುಂಬಿ ಹರಿಯುತ್ತಿವೆ. ಇದೇ ರೀತಿ ಮಳೆ ಸುರಿದಲ್ಲಿ ನದಿಗಳ ಅಕ್ಕಪಕ್ಕದ ಕೃಷಿ ಜಮೀನುಗಳು ಜಲಾವೃತವಾಗುವ ಆತಂಕ ರೈತರಲ್ಲಿದೆ.