ಚಿತ್ರದುರ್ಗ: ಗಾಂಜಾ ಗಿಡ ಬೆಳೆಸಿದ್ದ ಐಮಂಗಲ ಹೋಬಳಿಯ ಸಾಲುಹುಣಸೆ ಗೊಲ್ಲರಹಟ್ಟಿಯ ಪಾತಪ್ಪ, ಸೇವಿಸಿ ಅನುಚಿತವಾಗಿ ವರ್ತಿಸಿದ್ದ ಇದೇ ಗ್ರಾಮದ ಸಿದ್ಧಾರ್ಥ್, ಪ್ರಸನ್ನ ಈ ಮೂವರು ಆರೋಪಿತರನ್ನು ಬಂಧಿಸಿ, 3 ಕೆ.ಜಿ 700 ಗ್ರಾಂ ತೂಕದ ಗಾಂಜಾವನ್ನು ನಗರದ ಬಡಾವಣೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಅಮೃತ ಆಯುರ್ವೇದಿಕ್ ಕಾಲೇಜು ಬಳಿಯ ಯಂಗಮ್ಮನಕಟ್ಟೆ ರುದ್ರಭೂಮಿ ಸಮೀಪದ ಒಣತ್ಯಾಜ್ಯ ಕಟ್ಟಡದ
ಬಳಿ ಬಂಧಿತ ಇಬ್ಬರು ಆರೋಪಿಗಳು ಈಚೆಗೆ ಸೇವಿಸಿ ಅನುಚಿತವಾಗಿ ವರ್ತಿಸಿದ್ದರು. ವಿಷಯ ತಿಳಿದ ಪೊಲೀಸರು ಆರೋಪಿತರು ಸೇವಿಸಿದ್ದು, ದೃಢಪಟ್ಟ ಕಾರಣ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪಾತಪ್ಪ ಅವರೊಂದಿಗೆ ಕೈಜೋಡಿಸಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸುವುದು, ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಕೆಲ ವೇಳೆ ತಾವೇ ಸೇವಿಸುವುದಾಗಿ ತಿಳಿದು ಬಂದಿದೆ. ಈ ಕುರಿತು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಎಸ್ಪಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್ಪಿ ಎಚ್.ಆರ್. ಅನಿಲ್ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ನಯೀಂ ಅಹಮದ್, ಪಿಎಸ್ಐ ರಘು, ಸಿಬ್ಬಂದಿ ಪ್ರಕರಣ ಬೇಧಿಸಿದ್ದು, ಎಸ್ಪಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಂಜಾ ಬೆಳೆಯುವುದು, ಕುಮ್ಮಕ್ಕು ನೀಡುವುದು, ಮಾರಾಟ ಮಾಡುವುದು, ಸೇವಿಸುವುದು ಅಪರಾಧವಾಗಿದೆ. ಯುವಸಮೂಹ ಮಾದಕ ವಸ್ತುವಿಗೆ ಟಾರ್ಗೆಟ್ ಆಗುತ್ತಿದ್ದಾರೆ. ಇದ್ಯಾವುದಕ್ಕೂ ಅವಕಾಶ ನೀಡಬೇಡಿ ಎಂದು ಎಸ್ಪಿ ಧರ್ಮೇಂದರ್ಕುಮಾರ್ ಮೀನಾ ಎಚ್ಚರಿಸಿದ್ದಾರೆ.