ನಗರ: ಜಿಲ್ಲೆಯ ಪ್ರಮುಖ ಗಡಿ ಮಾರ್ಗವಾದ ಹುಲಿಕಲ್ ಮತ್ತು ನಾಗೋಡಿಯಲ್ಲಿ ಒಳಬರುವ ವಾಹನಗಳ ತಪಾಸಣೆ ತೀವ್ರವಾಗಿದೆ.
ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಭಾಗದಲ್ಲಿ ಭದ್ರತೆ ಮತ್ತು ತಪಾಸಣೆ ಕೈಗೊಳ್ಳಲಾಗಿದೆ. ವಾಹನ ದಟ್ಟಣೆ ಇರುವ ಹುಲಿಕಲ್ನಲ್ಲಿ ತೀವ್ರ ನಿಗಾ ವಹಿಸಲಾಗಿತ್ತು. ಪಾಸಿಟಿವ್ ಕೇಸ್ ಪತ್ತೆಯಾದ ನಂತರ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಶಿವಮೊಗ್ಗ ಜಿಲ್ಲಾದ್ಯಂತ 17 ಚೆಕ್ಪೋಸ್ಟ್ಗಳಿದ್ದು ಅದರಲ್ಲಿ ಹೊಸನಗರ ತಾಲೂಕಿನ ನಗರ ಪೊಲೀಸ್ಠಾಣಾ ವ್ಯಾಪ್ತಿಯ ಕೊಲ್ಲೂರು ಘಾಟ್ ಮಾರ್ಗ ಮತ್ತು ಹುಲಿಕಲ್ ಘಾಟ್ ಮಾರ್ಗದ ಚೆಕ್ಪೋಸ್ಟ್ನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ.
ಚೆಕ್ಪೋಸ್ಟ್ನಲ್ಲಿ ಓರ್ವ ಎಎಸ್ಐ, ತಲಾ ಇಬ್ಬರು ಕಾನ್ಸ್ಟೇಬಲ್, ಆರೋಗ್ಯ ಸಿಬ್ಬಂದಿ ಮತ್ತು ಹೋಂಗಾರ್ಡ್ಸ್ ನಿಯೋಜಿಸಲಾಗಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಬರುವ ವಾಹನಗಳನ್ನು ಪಾಸ್ ಇದ್ದರೆ ಮಾತ್ರ ಒಳಬಿಡಲಾಗುತ್ತಿದೆ.
ಕರೊನಾ ವಿರುದ್ಧದ ಹೋರಾಟದಲ್ಲಿ ತಾಲೂಕಿನ 2 ಪ್ರಮುಖ ಚೆಕ್ಪೋಸ್ಟ್ಗಳಾದ ಮಾಸ್ತಿಕಟ್ಟೆ -ಹುಲಿಕಲ್ ಮತ್ತು ನಾಗೋಡಿ ಚೆಕ್ಪೋಸ್ಟ್ಗಳಲ್ಲಿ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲೂ ಪಾಸಿಟಿವ್ ಬಂದಿರುವ ಕಾರಣ ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ಸಿಪಿಐ ಗುರಣ್ಣ ಹೆಬ್ಬಾಳ್ ತಿಳಿಸಿದ್ದಾರೆ.