ಗಜೇಂದ್ರಗಡ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಸಂಜೆ ಮಳೆಯ ಸಿಂಚನವಾಗಿದೆ. ಆಗಸದತ್ತ ಮುಖ ಮಾಡಿದ್ದ ರೈತನಿಗೆ ಮಳೆರಾಯ ಸಂತಸ ಮೂಡಿಸಿದ್ದಾನೆ.
ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಶೇಂಗಾ, ಹೆಸರು, ತೊಗರಿ, ಎಳ್ಳು, ಉಳ್ಳಾಗಡ್ಡಿ ಬೆಳೆಗಳೆಲ್ಲಾ ಬಾಡಲಾರಂಭಿಸಿದ್ದವು. ಬುಧವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಜಿಟಿ ಜಿಟಿ ಮಳೆ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ತುಂಬಿದೆ.
ಆಕರ್ಷಣೆಯ ಮೋಡದ ಸಾಲು: ಮುಂಗಾರು ಮೋಡಗಳು ಸೃಷ್ಟಿಸುವ ಚಿತ್ತಾರದ ಆಟ ನೋಡುಗರನ್ನು ಮುದಗೊಳಿಸುತ್ತಿವೆ. ಕಳೆದೆರಡು ವಾರಗಳ ಹಿಂದೆ ಸುರಿದಿದ್ದ ಮಳೆಯಿಂದಾಗಿ ಗಜೇಂದ್ರಗಡ, ಕಾಲಕಾಲೇಶ್ವರ, ಲಕ್ಕಲಕಟ್ಟಿ, ದಿಂಡೂರ, ಬೈರಾಪೂರ, ಜಿಗೇರಿ, ಕುಂಟೋಜಿ ಗ್ರಾಮಗಳಿಗೆ ಹೊಂದಿಕೊಂಡ ಗುಡ್ಡಗಳು, ಕೆರೆಕಟ್ಟೆಗಳು ಹಸಿರುಡುಗೆ ತೊಟ್ಟು ಕಂಗೊಳಿಸುತ್ತಿವೆ.