ಕುಶಾಲನಗರ: ಕೊಡವ ಆಚಾರ, ವಿಚಾರ, ಪದ್ಧತಿ ಮತ್ತು ಸಂಸ್ಕೃತಿಯನ್ನು ಎಲ್ಲರೂ ಆಚರಿಸುವ ಮೂಲಕ ಉಳಿಸಿಕೊಳ್ಳಬೇಕು ಎಂದು ಜೀವವೈವಿಧ್ಯ ಸಂಸ್ಥೆಯ ಅಧ್ಯಕ್ಷ ರವಿ ಕಾಳಪ್ಪ ಕಿವಿಮಾತು ಹೇಳಿದರು.
ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಪುತ್ತರಿ ಉರೂರುಮ್ಮೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಪೀಳಿಗೆ ಆಧುನಿಕತೆಯ ಹಿಂದೆ ಬಿದ್ದು, ಕೊಡವ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಯುವ ಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ನೀಡಿ, ನಮ್ಮ ಸಂಸ್ಕೃತಿಯ ಮಹತ್ವವನ್ನು ತಿಳಿಸಬೇಕು. ಅದರಿಂದ ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಬೇಕು ಎಂದರು.
ಉದ್ಯಮಿ ಜಮ್ಮಸಿ ಪೊನ್ನಪ್ಪ ಮಾತನಾಡಿ, ಕೊಡವ ಸಮಾಜ ಈಗ ಚಿಕ್ಕದಾಗಿದೆ. ವಿಶಾಲವಾದ ಜಾಗ ಖರೀದಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು. ಪ್ರಜ್ಞಾವಂತರು ಕೊಡವ ಸಂಪ್ರದಾಯವನ್ನು ತಿಳಿಸಲು ಮುಂದಾಗಬೇಕು. ಹಿರಿಯರು ಕಿರಿಯರಿಗೆ ಸಂಸ್ಕೃತಿ ಹೇಳಿಕೊಡಬೇಕು ಎಂದರು.
ಕೊಡವ ಸಮಾಜದ ಅಧ್ಯಕ್ಷ ಮಂಡೆಪಂಡ ಬೋಸ್ ಮೊಣ್ಣಪ್ಪ ಮಾತನಾಡಿ, ದೊಡ್ಡ ಜಾಗ ಖರೀದಿಗೆ ಜೇಮ್ಸಿ ಪೊನ್ನಪ್ಪ ಅವರು ಸಹಾಯ ಮಾಡಿದರೆ ವಿಶಾಲವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದರು. ಅದಕ್ಕೆ ಜೇಮ್ಸಿ ಪೊನ್ನಪ್ಪ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ನಮ್ಮ ಆಚಾರ, ವಿಚಾರ ಉಳಿಸುವ ಸದ್ದುದೇಶದಿಂದಲೇ ಉರೂರುಮ್ಮೆ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಎಂದು ತಿಳಿಸಿದರು.