ಬೆಳಗಾವಿ: ಧಾರವಾಡ-ಕಿತ್ತೂರು ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಫಲವತ್ತಾದ ಕೃಷಿಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಕೈ ಬಿಡುವಂತೆ ಒತ್ತಾಯಿಸಿ ರಾಜ್ಯ ರೈತ
ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟಿಸಿದು.
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ರ್ಯಾಲಿ ನಡೆಸಿದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಭೂಮಿ ವಶಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿದರು. ರೈಲ್ವೆ ಮಾರ್ಗ ನಿರ್ಮಾಣಕ್ಕೆ 2020ರಲ್ಲಿ ಬೆಳಗಾವಿ-ಸಾಂಬ್ರಾ, ಸಂಪಗಾವಿ, ಬೈಲಹೊಂಗಲ ವಾಯಾ ಕಿತ್ತೂರು-ಧಾರವಾಡ ದಾರಿ ಗುರುತಿಸಲಾಗಿತ್ತು.
ನಂತರದಲ್ಲಿ ಅದನ್ನು ಫಲವತ್ತಾದ ಭೂಮಿ ಇರುವ ದೇಸೂರ, ಕೆ.ಕೆ.ಕೊಪ್ಪ ಗ್ರಾಮಕ್ಕೆ ವರ್ಗಾಯಿಸಿರುವುದು ಪ್ರಶ್ನಾರ್ಹವಾಗಿದೆ. ದೇಸೂರು, ನಂದಿಹಾಳ, ಹರ್ಲಗುಂಜಿ, ನಾಗೇನಹಟ್ಟಿ, ಗ್ರಾಮಗಳ ಮೇಲ್ಭಾಗದಲ್ಲಿ ಬರಡುಭೂಮಿ ಇದೆ. ಈ ಬರಡು ಭೂಮಿಯನ್ನು ರೈಲು ಮಾರ್ಗಕ್ಕೆ ವಶಪಡಿಸಿಕೊಳ್ಳಬೇಕು.
ಫಲವತ್ತಾದ ಕೃಷಿಭೂಮಿ ವಶಪಡಿಸಿಕೊಳ್ಳಬಾರದು ಎಂದು ಒತ್ತಾಯಿಸಿದರು. ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ, ಪ್ರಕಾಶ ನಾಯಕ, ರಾಜು ಪವಾರ, ಸುರೇಶ ಚೌಗಲಾ, ನರೇಂದ್ರ ಪಾಟೀಲ, ಪ್ರಸಾದ ಪಾಟೀಲ, ಸಂಗಪ್ಪ ಕುಂಬಾರ, ಕಿರಣ ಕೊಂಡೆ, ದೇವೇಂದ್ರ ಪಾಟೀಲ, ಪರಶುರಾಮ ಜಾಧವ, ಮಾರುತಿ
ಲೋಕೂರ, ಸಂತೋಷ ಪಾಟೀಲ, ಪುಂಡಲಿಕ ಮೇಳಗೆ, ಚೇತನ ಪಾಟೀಲ, ಬಸಂತ ನಾಯಿಕ ಇತರರು ಇದ್ದರು.