ಅಣ್ಣಿಗೇರಿ: ಅಂದಾಜು 20 ಎಕರೆ ವ್ಯಾಪ್ತಿಯಲ್ಲಿರುವ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ-ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಸಂಜೆಯಾದರೆ ಕುಡುಕರ ತಾಣವಾಗಿ ಪರಿವರ್ತನೆಯಾಗುತ್ತದೆ.
ನಿತ್ಯ ಬೆಳಗಾದರೆ ಸಾಕು ಮಾರುಕಟ್ಟೆ ಆವರಣದ ತುಂಬಾ ಮದ್ಯದ ಬಾಟಲಿಗಳು, ಪ್ಯಾಕೆಟ್ಗಳ ದರ್ಶನವಾಗುತ್ತದೆ. ಮಹಿಳೆಯರು ಹಾಗೂ ಪುರುಷರು ಪ್ರತಿದಿನ ಬೆಳಗಿನ ಜಾವ ವಾಕಿಂಗ್ಗೆ ಬರುತ್ತಾರೆ. ರೈತರು ಫಸಲನ್ನು ಇಲ್ಲಿಯೇ ಒಕ್ಕಲಿ ಮಾಡುತ್ತಾರೆ. ಈ ಮಧ್ಯೆ ಕುಡುಕರ ಎಪಿಎಂಸಿಯಲ್ಲಿ ಹೇಳುವವರೂ ಕೇಳುವವರೂ ಇಲ್ಲದ್ದರಿಂದ ಸಂಜೆಯಾಗುತ್ತಲೇ ಕುಡುಕರ ಹಾಗೂ ಜೂಜಾಟದ ಅಡ್ಡೆಯಾಗಿ ಮಾರ್ಪಡುತ್ತಿದೆ. ಇನ್ನಾದರೂ ಇದನ್ನು ತಪ್ಪಿಸಿ ಸ್ವಚ್ಛತೆಯತ್ತ ಗಮನಹರಿಸಿ ವಾಯುವಿಹಾರಿಗಳಿಗೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರ ಆಗ್ರಹವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಪಿಎಂಸಿ ನಿರ್ದೇಶಕ ರಾಘವೇಂದ್ರ ಸಜ್ಜನ್, ಅಧಿಕಾರ ವಹಿಸಿಕೊಂಡ ತಕ್ಷಣವೇ ಕ್ರಮ ತೆಗೆದುಕೊಂಡಿದ್ದೇನೆ. ಈಗಾಗಲೇ ಪ್ರತಿಶತಃ ಅರ್ಧದಷ್ಟು ಕೆಲಸ ಮಾಡಿದ್ದೇನೆ. ಸ್ವಚ್ಛತೆ ಕುರಿತು ಅಗತ್ಯ ಎಚ್ಚರಿಕೆ ವಹಿಸಲಾಗುವುದು’ ಎಂದರು.
ಅಣ್ಣಿಗೇರಿಯ ಠಾಣಾಧಿಕಾರಿಗೆ ಪತ್ರ ಬರೆದು ಗಮನಕ್ಕೆ ತರಲಾಗುವುದು. ಟೆಂಡರ್ ಪಡೆದವರು ಸರಿಯಾಗಿ ಕೆಲಸ ಮಾಡುವಂತೆ ಎಚ್ಚರಿಸಲಾಗುವುದು.
| ಮೋನಪ್ಪ ತಳವಾರ
ಎಪಿಎಂಸಿ ಅಧ್ಯಕ್ಷ
ಅಧಿಕಾರಿಗಳು ಇದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಭದ್ರತಾ ಸಿಬ್ಬಂದಿಯೇ ಎಪಿಎಂಸಿ ಅಧ್ಯಕ್ಷ ಎನ್ನುವಂತಹ ವಾತಾವರಣ ಸೃಷ್ಟಿಸಿದ್ದಾರೆ.
| ಮಂಜುನಾಥ ಮಾಯಣ್ಣವರ
ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ