ಗೋಕರ್ಣ: ಕುಮಟಾ ಕರಾವಳಿ ಕಾವಲು ಪೊಲೀಸರು ಸಿಪಿಐ ಮಾರುತಿ ನಾಯಕ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಮುಖ್ಯ ಸಮುದ್ರ ತೀರದ ಸ್ವಚ್ಛತೆ ಕೈಗೊಂಡರು.
ಮೊದಲ ಹಂತದಲ್ಲಿ ಗೋಕರ್ಣದಿಂದ ಗಂಗಾವಳಿವರೆಗಿನ ಅಂದಾಜು 6 ಕಿ.ಮೀ. ಉದ್ದದ ಬೀಚ್ನ ಅರ್ಧ ಭಾಗದಲ್ಲಿ ತುಂಬಿಕೊಂಡಿದ್ದ ತ್ಯಾಜ್ಯ ಮತ್ತು ಇತರ ವಸ್ತುಗಳನ್ನು ಶೇಖರಿಸಿ ಪಂಚಾಯಿತಿ ಕಸ ಸಂಗ್ರಹ ಘಟಕಕ್ಕೆ ಸಾಗಿಸಲಾಯಿತು. ಪೊಲೀಸರ ಶ್ರಮದಿಂದ ಮಳೆಗಾಲದ ಹೊಲಸಿನಿಂದ ಮುಕ್ತವಾದ ಸಮುದ್ರ ತೀರ ಮತ್ತೆ ಶುಚಿತ್ವ ಪಡೆಯುವಂತಾಯಿತು. ‘ಕರೊನಾ ಆತಂಕದಿಂದಾಗಿ ಜಿಲ್ಲೆಯ ಸಮುದ್ರ ತೀರಗಳಿಗೆ ಪ್ರವಾಸಿಗರು ಬರುತ್ತಿಲ್ಲ. ಕರಾವಳಿ ಕಾವಲು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶದಂತೆ ಸ್ವಚ್ಛ ಮಾಡಿ ಮತ್ತೆ ಪ್ರವಾಸೋದ್ಯಮಕ್ಕೆ ಅಣಿಗೊಳಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಮಾರುತಿ ನಾಯಕತಿಳಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಹೋಂಗಾರ್ಡ್ಸ್, ಪಂಚಾಯಿತಿ ಸಿಬ್ಬಂದಿ, ಪಿಎಸ್ಐಗಳಾದ ಎಂ.ಜಿ. ಬೋರ್ಕರ್, ಮಾಲಿನಿ ಹಂಸಬಾವಿ ಮತ್ತು ಸಿಬ್ಬಂದಿ ಇದ್ದರು.