ಬೆಳಗಾವಿ: ತಾಲೂಕಿನ ಬೆನಕನಹಳ್ಳಿ ಗ್ರಾಮ ಬಳಿ ಕೆಂಬಾಳೆ ನಾಲಾದಲ್ಲಿ ಭಾನುವಾರ ಸಂಜೆ ಮುಳುಗಿದ್ದ ವ್ಯಕ್ತಿಯ ಶವ ಸೋಮವಾರ ಪತ್ತೆಯಾಗಿದ್ದು, ಮೃತನನ್ನು ಮಲ್ಲಪ್ಪ ದೇಸೂರಕರ (48) ಎಂದು ಗುರುತಿಸಲಾಗಿದೆ.
ಸ್ಥಳೀಯ ಬ್ರಹ್ಮಲಿಂಗ ದೇವಸ್ಥಾನದ ಬಳಿ ಕೆಂಬಾಳೆ ನಾಲಾ ಬಳಿ ಭಾನುವಾರ ಸಂಜೆ 5.30ರ ಸುಮಾರಿಗೆ ನಾಲೆಗೆ ಕಾಲು ಜಾರಿ ಬಿದ್ದಿದ್ದ ಮಲ್ಲಪ್ಪ ಈಜು ಬಾರದೇ ಮುಳುಗಿದ್ದ. ಘಟನೆ ಗಮನಿಸಿದ್ದ ಸ್ಥಳೀಯರು ಹೆಲ್ಪ್ಲೈನ್ ಎಮರ್ಜೆನ್ಸಿ ರೆಸ್ಕೂೃ ಫೌಂಡೇಷನ್(ಎಚ್ಇಆರ್ಎಫ್) ಹಾಗೂ ಅಗ್ನಿಶಾಮಕ ಠಾಣೆ, ಎಸ್ಡಿಆರ್ಎಫ್ಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.
ಎಚ್ಇಆರ್ಎಫ್ನ ಸಿಇಒ ಬಸವರಾಜ ಹಿರೇಮಠ ನಾಲಾದಲ್ಲಿ ಕ್ಯಾಮರಾ ಬಿಟ್ಟು ಶೋಧನೆ ನಡೆಸಿದರೆ, ಎಸ್ಡಿಆರ್ಎಫ್ ತಂಡದ ಅಧಿಕಾರಿ ಅನಂತಗೌಡ ಪಾಟೀಲ ನೇತೃತ್ವದಲ್ಲಿ ಬೋಟ್ ಮೂಲಕ ಈಜುಗಾರರ ಸಹಾಯದಿಂದ ಪತ್ತೆ ಕಾರ್ಯ ನಡೆಸಿತು. ಕತ್ತಲೆಯಾದ್ದರಿಂದ ಭಾನುವಾರ ರಾತ್ರಿ ಕಾರ್ಯಾಚರಣೆ ಮುಂದುವರಿದು, ಎಚ್ಇಆರ್ಎಫ್ ತಂಡ ಕ್ಯಾಮರಾ ಮೂಲಕ ಶವ ಪತ್ತಹಚ್ಚಿತು. ಕೂಡಲೇ ನೀರಿಗಿಳಿದ ಎಸ್ಡಿಆರ್ಎಫ್ ಹಾಗೂ ಎಚ್ಇಆರ್ಎಫ್ ತಂಡದವರು ಶವ ಹೊರತೆಗೆದರು.
ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಡಿಆರ್ಎಫ್ ತಂಡದ ಜಾವೇದ್ ಜಕಾತಿ, ನಂದಕುಮಾರ ಪಾಲ್ಕರ್, ನಾಗೇಶ ಗುನಾಯಿ, ಯಲಪ್ಪಾ ಗುಜನಟ್ಟಿ, ಸಂಗಣ್ಣವರ,ಅರ್ಜುನ ನಾಯ್ಕ ಇತರರು ಕಾರ್ಯಾಚರಣೆಯಲ್ಲಿದ್ದರು.