ಮೈಸೂರು: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕ, ರೋಟರಿ ಹೆರಿಟೇಜ್ ಕ್ಲಬ್ ಸಹಯೋಗದಲ್ಲಿ ಜು.26ರಂದು ಬೆಳಗ್ಗೆ 9ಕ್ಕೆ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ದಿವಾಕರ್ ತಿಳಿಸಿದರು.
ನಗರದ ಮೆಟ್ರೋಪೋಲ್ ವೃತ್ತ ಬಳಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಬಳಿ ರ್ಯಾಲಿ ಶುರುವಾಗಲಿದೆ. ಎನ್ಸಿಸಿ ಕಮಾಂಡೆಂಟ್ ಆರ್.ಆರ್.ಮೆನನ್ ರ್ಯಾಲಿಗೆ ಹಸಿರು ನಿಶಾನೆ ತೋರಲಿದ್ದು, ಮಾಜಿ ಸೈನಿಕರು, ರೋಟರಿ ಕ್ಲಬ್ ಸದಸ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ 500 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಐವರು ಮಾಜಿ ಸೈನಿಕರನ್ನು ಸನ್ಮಾನಿಸಲಾಗುವುದು. ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಆಗಿ ಆಯ್ಕೆಯಾಗಿರುವ ಮಾಜಿ ಸೈನಿಕ ವಿಕ್ರಮ್ರಾಜ್ ಅವರ ಪುತ್ರಿ ತನುಶ್ರೀ ಗೌಡ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.