ಬೆಳಗಾವಿ: ಸಾರ್ವಜನಿಕ ವ್ಯವಹಾರಗಳ ಪ್ರತಿಷ್ಠಾನ ಮತ್ತು ಗ್ರಾಹಕ ಏಕತೆ ಮತ್ತು ಟ್ರಸ್ಟ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಗೆ 2019ರ ಮೋಟಾರು ವಾಹನ ಕಾಯ್ದೆ ಹಾಗೂ ಕಾಯ್ದೆ ಜಾರಿಯಲ್ಲಿನ ಸವಾಲುಗಳು ಕುರಿತು ಶುಕ್ರವಾರ ಕಾರ್ಯಾಗಾರ ಜರುಗಿತು.
ಸಾರ್ವಜನಿಕ ವ್ಯವಹಾರಗಳ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಅನ್ನಪೂರ್ಣಾ ರವಿಚಂದರ್, ಕಾಯ್ದೆ ಅನುಷ್ಠಾನಕ್ಕೆ ಸಾಮಾಜಿಕ ಹೊಣೆಗಾರಿಕೆ ಅಗತ್ಯ ಎಂದು ಹೇಳಿದರು.
ಗ್ರಾಹಕ ಏಕತೆ ಮತ್ತು ಟ್ರಸ್ಟ್ ಸೊಸೈಟಿ ಇಂಟರ್ನ್ಯಾಶನಲ್ನ ಹಿರಿಯ ಕಾರ್ಯಕ್ರಮಾಧಿಕಾರಿ ಮಧುಸೂದನ್ ಶರ್ಮಾ ಮಾತನಾಡಿ, ಕರ್ನಾಟಕದಲ್ಲಿ 40,658 ರಸ್ತೆಗಳಿವೆ. 2019ರಲ್ಲಿ ಈ ರಸ್ತೆಗಳಲ್ಲಿ 10 ಸಾವಿರ ಜನರ ಸಾವು ಸಂಭವಿಸಿವೆ. ರಸ್ತೆ ನಿಯಮ ಪಾಲಿಸದಿರುವುದು ಹಾಗೂ ಅಸುರಕ್ಷಿತ ಕ್ರಮಗಳೇ ಕಾರಣ. ಪ್ರತಿಯೊಬ್ಬರೂ ರಸ್ತೆ ನಿಮಯ ಪಾಲಿಸಬೇಕು. ಈ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಅಸುರಕ್ಷಿತ ರಸ್ತೆಗಳನ್ನು ಹೊಂದಿರುವ ಸಾಲಿನಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಅದರಲ್ಲಿ ಕರ್ನಾಟಕದ ಪಾಲೂ ಹೆಚ್ಚಿದೆ. ಅಪಘಾತಗಳು ಭಾರತದ ಆರ್ಥಿಕತೆಗೂ ಹೊಡೆತ ನೀಡುತ್ತವೆ ಎಂದರು.
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಆನ್ಲೈನ್ ಮೂಲಕ ಮಾತನಾಡಿ, 2019ರ ಮೋಟಾರು ವಾಹನ ಕಾಯ್ದೆ ನಿಯಮಗಳು ಮತ್ತು ಅಧಿಸೂಚನೆಗಳ ಬಗ್ಗೆ ಅರಿವು ಮೂಡಿಸಲಾಗಿದೆ. ರಸ್ತೆ ಬಳಸುವ ನಾಗರಿಕರು ಸಂಚಾರದ ವೇಳೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ಕಾನೂನು ಜಾರಿಗೊಳಿಸುವವರು ಸರಿಯಾಗಿ ಕೆಲಸ ಮಾಡಬೇಕು ಎಂದರು.
ತಾಂತ್ರಿಕ ಸೆಷನ್ ನಡೆಸಿದ ಸಾರಿಗೆ ಜಂಟಿ ಆಯುಕ್ತೆ ಎಂ. ಶೋಭಾ ಮಾತನಾಡಿ, ಅತಿಯಾದ ವೇಗ ಅಪಾಯಕ್ಕೆ ಪ್ರಮುಖ ಕಾರಣ. ಜತೆಗೆ ಕಳಪೆ ರಸ್ತೆಗಳು ಮತ್ತು ರಸ್ತೆಗಳನ್ನು ನಿಯಂತ್ರಿಸುವ ಸಂಸ್ಥೆಯ ಸಾಮರ್ಥ್ಯದ ಕೊರತೆಯು ರಸ್ತೆ ಸುರಕ್ಷತೆ ಸಮಸ್ಯೆಗಳ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ ಎಂದರು.
ಬೆಳಗಾವಿ ಪ್ರಾದೇಶಿಕ ಸಾರಿಗೆ ಕಚೇರಿ ಆಯುಕ್ತ ಶಿವಾನಂದ ಮಗದುಮ್ಮ ಮಾತನಾಡಿ, ವೇಗದ ಮೀತಿ ಮೀರಿ ವಾಹನ ಓಡಿಸುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಹೆಲ್ಮೆಟ್ಗಳಂತಹ ರಕ್ಷಣಾ ಸಾಧನಗಳ ಬಳಕೆಯ ಹೊರತಾಗಿಯೂ ದೃಷ್ಟಿಯ ಸ್ಪಷ್ಟತೆಯ ಕೊರತೆಯೂ ಕಾರಣವಾಗುತ್ತಿದೆ. 10 ವರ್ಷಗಳಲ್ಲಿ ಅತಿವೇಗದ ಚಾಲನೆ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ ಎಂದರು.
ಬಿಮ್ಸ್ನ ಆರ್ಎಂಒ ಡಾ.ಪುಷ್ಪಾ ರಸ್ತೆಯ ಟ್ರಾಮಾ ಕೇರ್ ಕುರಿತು ಮಾತನಾಡಿದರು. ಉಪ ಪೊಲೀಸ್ ಆಯುಕ್ತೆ ಎಸ್.ಪಿ.ಸ್ನೇಹಾ ತಾಂತ್ರಿಕ ಸೆಷನ್ ನಡೆಸಿದರು. ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಮಹಾನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ.ಬೋರಲಿಂಗಯ್ಯ, ಪ್ರಾದೇಶಿಕ ಸಾರಿಗೆ ಇಲಾಖೆ ಸಿಬ್ಬಂದಿ, ಆರೋಗ್ಯ, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆ ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.