ಕೊಡೇಕಲ್ : ಗ್ರಾಮೀಣ ಪ್ರದೇಶ ಶುಚಿಯಾಗಿಡಲು ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಸಾಕಷ್ಟು ಹಣ ಖರ್ಚು ಮಾಡಿದರೂ ಗ್ರಾಮ ಪಂಚಾಯಿತಿಗಳ ನಿರ್ಲಕ್ಷÈದಿಂದಾಗಿ ಹಳ್ಳಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಎಂಬುದಕ್ಕೆ ಮಾರನಾಳ ಗ್ರಾಪಂ ನಿದರ್ಶನ.
ಕೇಂದ್ರ ಸ್ಥಾನವಾಗಿರುವ ಮಾರನಾಳ ಗ್ರಾಪಂಗೆ ಯಣ್ಣಿವಡಗೇರಿ, ಮದಲಿಂಗನಾಳ, ಕೋಮಲಾಪುರ, ಬಸಾಪುರ, ಮಾರನಾಳ ದೊಡ್ಡ ತಾಂಡಾ, ಬ್ಯಾಲದಗಿಡದ ತಾಂಡಾ ಇತರ ತಾಂಡಾಗಳು ಒಳಗೊಂಡಿವೆ. ಈ ಗ್ರಾಮ ಮತ್ತು ತಾಂಡಾಗಳಲ್ಲಿ ಸಮರ್ಪಕ ಕಸ ವಿಲೇವಾರಿಯಾಗದ ಕಾರಣ ಜನರು ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ.
ಕಸ ವಿಲೇವಾರಿ ಮಾಡಲೆಂದೇ ಗ್ರಾಪಂಗೆ ಕಸ ಸಂಗ್ರಹ ವಾಹನ ಮೂರು ವರ್ಷದ ಹಿಂದೆ ನೀಡಲಾಗಿದೆ. ಆದರೆ ವಾಹನ ಪಂಚಾಯಿತಿಯಲ್ಲಿ ಇರದೆ ಬೇರೆ ಊರಿನ ತೋಟವೊಂದರಲ್ಲಿ ನಿಂತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಪ್ರತಿ ಗ್ರಾಮ ಮತ್ತು ತಾಂಡಾದಲ್ಲಿ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಮಾಡುವ ಬಕೆಟ್ಗಳು ಸಹ ಗ್ರಾಪಂ ಕಚೇರಿಯಲ್ಲಿ ಧೂಳು ತಿನ್ನುತ್ತಿವೆ.
ಗ್ರಾಪಂ ನಿರ್ಲಕ್ಷÈದಿಂದಾಗಿ ಕರ್ಮಚಾರಿಗಳು ಕಸ ಸಂಗ್ರಹಿಸಿ ಊರ ಎದುರಿನ ಗುಂಡಿಯಲ್ಲಿ ಹಾಕುತ್ತಿರುವುದರಿಂದ ಗಬ್ಬೆದ್ದು ನಾರುತ್ತಿದೆ. ಇದರಿಂದ ಮಕ್ಕಳು ಮತ್ತು ಸಾರ್ವಜನಿಕರಿಗೆ ರೋಗ ಭೀತಿ ಕಾಡಲಾರಂಭಿಸಿದೆ. ಊರಿನ ಸರ್ಕಾರಿ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವಂತೆ ಸರ್ಕಾರ ಆದೇಶಿಸಿದ್ದರೂ ಈವರೆಗೆ ಆ ಕೆಲಸ ಕೈಗೂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಒಟ್ಟಾರೆ ಪಂಚಾಯಿತಿಯ ಸರ್ವ ಸದಸ್ಯರು ಮತ್ತು ಪಿಡಿಒ ಈ ಎಲ್ಲ ಅವಾಂತರಕ್ಕೆ ಹೊಣೆಗಾರರು. ಸರ್ಕಾರ ನೀಡಿರುವ ತ್ಯಾಜ್ಯ ವಿಲೇವಾರಿ ವಾಹನ ಮತ್ತು ಹಸಿ ಮತ್ತು ಒಣ ಕಸ ಬೇರ್ಪಡಿಸಿಡುವ ಬಕೆಟ್ಗಳನ್ನು ಸಹ ವಿತರಿಸದೆ ಪಂಚಾಯಿತಿಯ ವ್ಯಾಪ್ತಿಯ ಎಲ್ಲ ಗ್ರಾಮ ಮತ್ತು ತಾಂಡಾಗಳಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಈಗಲಾದರೂ ಸಂಬAಧಿಸಿದ ಜಿಪಂ, ತಾಪಂ ಅಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಊರಲ್ಲಿ ಸ್ವಚ್ಛ ವಾತಾವರಣ ನಿರ್ಮಿಸಲು ಕೈಗೊಳ್ಳಬೇಕು ಎಂಬುದು ಗ್ರಾಪಂ ವಲಯದ ಸಾರ್ವಜನಿಕರ ಒತ್ತಾಯವಾಗಿದೆ.