ಭಟ್ಕಳ : ತಾಲೂಕಿನ ಮಾರುಕೇರಿ ಗ್ರಾಪಂ ವ್ಯಾಪ್ತಿಯ ಕೋಟಖಂಡದ ಕಲ್ಲಬ್ಬೆ ಶಾಲೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಕಾರಣ ಹೊನ್ನಾವರ ತಾಲೂಕಿನ ಶಿಕ್ಷಕ ದಂಪತಿ ಶ್ರೀಧರ ಗಣಪತಿ ಆಚಾರಿ ಹಾಗೂ ಜಯಾ ಆಚಾರಿ ಅವರು. ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳಿಂದಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಶ್ರೀಧರ ಗಣಪತಿ ಆಚಾರಿ ಅವರು 1993ರಲ್ಲಿ ಶಿಕ್ಷಕರಾಗಿ ಕಲ್ಲಬ್ಬೆಗೆ ಬಂದ ಸಂದರ್ಭದಲ್ಲಿ ಉತ್ತಮ ಕಟ್ಟಡವೂ ಇರಲಿಲ್ಲ. ಶಾಲೆ ತಲುಪಲು ಹಾದಿಯೂ ದುರ್ಗಮವಾಗಿತ್ತು. ಇಂತಹ ಸನ್ನಿವೇಶದಲ್ಲಿ ಶ್ರೀಧರ ಅವರ ಸತತ ಪ್ರಯತ್ನದಿಂದಾಗಿ 2005ರಲ್ಲಿ ಹೊಸ ಕಟ್ಟಡ ತಲೆ ಎತ್ತಿತು. ಜತೆಗೆ ಶಾಲೆಗೆ ಕಾಂಪೌಂಡ್, ಶೌಚಗೃಹ, ಸುಸಜ್ಜಿತ ಸಭಾವೇದಿಕೆಯೂ ನಿರ್ವಣವಾಯಿತು. ಹಣದ ಕೊರತೆ ಕಂಡು ಬಂದಾಗ ತಮ್ಮ ಸಹೋದರರನ್ನು ಊರಿನಿಂದ ಕರೆಸಿಕೊಂಡು ಶ್ರಮದಾನದ ಮೂಲಕ ಕೆಲಸ ಮಾಡಿಸಿದ ಹೆಗ್ಗಳಿಕೆ ಶ್ರೀಧರ ಅವರದು. ಇದಲ್ಲದೆ, ಗ್ರಾಮಸ್ಥರಿಗೆ ಪಾಸ್ಬುಕ್ ಮಾಡಿಸಿಕೊಟ್ಟು ಉದ್ಯೋಗ ಖಾತ್ರಿ ಯೋಜನೆಯ ಲಾಭ ದೊರಕಿಸಿಕೊಟ್ಟಿದ್ದಾರೆ.
ಪತ್ನಿ, ಶಿಕ್ಷಕಿ ಜಯಾ ಆಚಾರಿ ಅವರು 2009ರಲ್ಲಿ ಇದೇ ಶಾಲೆಗೆ ವರ್ಗಾವಣೆಗೊಂಡಿದ್ದರಿಂದ ಶಾಲೆಯ ಪ್ರಗತಿಗೆ ಮತ್ತಷ್ಟು ಅನುಕೂಲವಾಯಿತು. ದಂಪತಿಯ ಸತತ ಪ್ರಯತ್ನದಿಂದಾಗಿ ಶಾಲೆಯ ಹೊರಗೆ ತರಕಾರಿ ತೋಟವೂ ನಿರ್ವಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಕೊರತೆಯಿಂದ ಕೆಲ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಆದರೆ, ಕಲ್ಲಬ್ಬೆ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 34 ವಿದ್ಯಾರ್ಥಿಗಳಿದ್ದಾರೆ. ಗ್ರಾಮದ ಯಾರೊಬ್ಬರೂ ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಳುಹಿಸದೇ ಕಲ್ಲಬ್ಬೆ ಶಾಲೆಗೆ ಕಳುಹಿಸುತ್ತಿದ್ದಾರೆ. ಶಾಲೆಯಲ್ಲಿ ಇಬ್ಬರು ಉರ್ದು ವಿದ್ಯಾರ್ಥಿಗಳಿದ್ದಾರೆ.
ಶಿಕ್ಷಕ ದಂಪತಿಗೆ ಸನ್ಮಾನ: ಇತ್ತೀಚೆಗೆ ಕಲ್ಲಬ್ಬೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ವಜ್ರಮಹೋತ್ಸವದಲ್ಲಿ ಶ್ರೀಧರ ಆಚಾರಿ, ಜಯಾ ಆಚಾರಿ, ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ, ನಾರಾಯಣ ಹೆಬ್ಬಾರ, ಎಸ್ಡಿಎಂಸಿ ಅಧ್ಯಕ್ಷರು, ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಮಾರುಕೇರಿ ಗ್ರಾಪಂ ಅಧ್ಯಕ್ಷ ನಾರಾಯಣ ಎಸ್. ಹೆಬ್ಬಾರ, ಸದಸ್ಯ ಮೋಹನ ಎಸ್. ಗೊಂಡ, ಸೊಸೈಟಿ ಅಧ್ಯಕ್ಷ ಶ್ರೀಕಂಠ ಹೆಬ್ಬಾರ, ಎಸ್ಡಿಎಂಸಿ ಅಧ್ಯಕ್ಷ ಅಶ್ವಥ್ ಶೆಟ್ಟಿ, ಮಾಜಿ ಅಧ್ಯಕ್ಷ ಈರಪ್ಪ ನಾಯ್ಕ, ಶಿಕ್ಷಣ ಇಲಾಖೆಯ ರಾಮಯ್ಯ ಗೊಂಡ, ಶಂಕರ ಉಪ್ಪರಗಿನಮೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಚಿದಾನಂದ ಪಟಗಾರ, ಎಸ್ಪಿ ಪ್ರೌಢಶಾಲೆ ಮುಖ್ಯಶಿಕ್ಷಕ ಪಿ.ಟಿ. ಚವ್ಹಾಣ್, ವೆಂಕಟೇಶ ಶೇರುಗಾರ ಇತರರಿದ್ದರು.