ಕಳಸ: ಕಳೆದೆರಡು ತಿಂಗಳಿಂದ ಈ ಭಾಗದಲ್ಲಿ ಸಂಚಾರ ಮಾಡುತ್ತಿರುವ ಎರಡು ಕಾಡಾನೆಗಳು ವಶಿಷ್ಠಾಶ್ರಮ ಸಂಜೀವ ಮೆಟ್ಟಿಲ ಬಳಿ ಶನಿವಾರ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಳೆದ ನಾಲ್ಕು ದಿನದಿಂದ ಕಾಡಾನೆಗಳು ಹಳುವಳ್ಳಿ, ಕೊಂಡದಮನೆ ಪ್ರದೇಶದಲ್ಲಿ ಕಂಡು ಬಂದಿದ್ದು ಶನಿವಾರ ವಶಿಷ್ಠಾಶ್ರಮದ ಬಳಿ ಭದ್ರಾ ನದಿಯ ಬಳಿ ಕಾಣಿಸಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆನೆ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಆನೆಗಳು ಕಳೆದ ಮೂರ್ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಭತ್ತ, ಅಡಕೆ, ಬಾಳೆ ಮುಂತಾದ ಬೆಳೆಗೆ ಹಾನಿ ಮಾಡಿವೆ.
ಎರಡು ತಿಂಗಳಿನಿಂದ ಹಳುವಳ್ಳಿ, ಮಾವಿನಕೆರೆ, ಮಾಗಲು, ಗಣಪತಿಕಟ್ಟೆ, ಅಬ್ಬುಗುಡಿಗೆ, ಎಸ್.ಕೆ.ಮೇಗಲ್, ನೆಲ್ಲಿಬೀಡು, ಜಾಂಬ್ಲೆ, ಕುದುರೆಮುಖ ಮುಂತಾದ ಪ್ರದೇಶಗಳಿಗೆ ತೆರಳಿ ಅಲ್ಲಿ ಸಾಕಷ್ಟು ಪ್ರಮಾಣದ ಬೆಳೆ ಹಾನಿ ಮಾಡಿವೆ.
ಅಲ್ಲದೆ ಹೆಮ್ಮಕ್ಕಿ ಪ್ರದೇಶದಲ್ಲೂ ಶುಕ್ರವಾರ ರಾತ್ರಿ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು ಅಲ್ಲಿಯೂ ಕೃಷಿಗೆ ಸಾಕಷ್ಟು ಹಾನಿ ಮಾಡಿವೆ ಎನ್ನಲಾಗಿದೆ.