ರಾಮನಗರ : ಅಕ್ರಮವಾಗಿ ಗ್ರಾನೈಟ್ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ದೂರಿನ ಮೇರೆಗೆ ದಾಳಿ ನಡೆಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಪಾರ ಪ್ರಮಾಣದ ಗ್ರಾನೈಟ್ ಕಲ್ಲುಗಳು, ವಾಹನಗಳು ಹಾಗೂ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಭೂ ವಿಜ್ಞಾನಿ ಪ್ರಶಾಂತ್ ನೇತೃತ್ವದ ತಂಡ ಗುರುವಾರ ದಾಳಿ ನಡೆಸಿದ್ದು ಈ ವೇಳೆ ಬೃಹತ್ ಗಾತ್ರದ 10 ಕಲ್ಲುಗಳು, ಒಂದು ಟ್ರ್ಯಾಕ್ಟರ್, ಹಿಟಾಜಿ, ಒಂದು ಕಂಪ್ರೆಸರ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಹಾರೋಹಳ್ಳಿ ಹೋಬಳಿ ರಾಂಪುರದ ನಾಗರಾಜು ಎಂಬುವವರಿಗೆ ಸೇರಿದ ಸರ್ವೇ ನಂ.188ರ ಪಟ್ಟ ಜಮೀನಿನಲ್ಲಿ ಅನುಮತಿ ಪಡೆಯದೆ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಪ್ರಕರಣವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು, ಪ್ರಕರಣ ದಾಖಲಿಸುವುದು ಅಥವಾ ದಂಡ ವಿಧಿಸುವ ಕುರಿತಂತೆ ಜಿಲ್ಲಾಧಿಕಾರಿಗಳು ನಿರ್ಧರಿಸಲಿದ್ದಾರೆ. ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಗೆ ಸ್ಫೋಟಕಗಳನ್ನು ಪೂರೈಕೆ ಮಾಡಲಾಗುತ್ತಿತ್ತು ಎನ್ನುವ ಬಗ್ಗೆಯೂ ತನಿಖೆ ನಡೆಯಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.