ಚಿತ್ರದುರ್ಗ: ಕಲೆ, ಕಲಾ ತಂಡಗಳ ಉಳಿವಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರ ಶ್ರಮಿಸುತ್ತಿದೆ ಎಂದು ಇಲಾಖೆ ಸಹಾಯಕ ಎಸ್.ಕೆ.ಮಲ್ಲಿಕಾರ್ಜುನ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಆಶ್ರಯದಲ್ಲಿ ಸಂಸ್ಥೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸಾಂಸ್ಕೃತಿಕ ಸೌರಭ -2023, ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮರೆಯಾಗುತ್ತಿರುವ ಕಲೆ, ಕಲಾತಂಡಗಳ ಉಳಿಸಿ ಬೆಳೆಸಲು ಪ್ರತಿಯೊಬ್ಬರ ಪ್ರೋತ್ಸಾಹದ ಅಗತ್ಯವಿದೆ ಎಂದರು. ಕಲಾ ತಂಡಗಳ ಮೆರವಣಿಗೆ ಉದ್ಘಾಟಿಸಿದ ವಿಶ್ವಮಾನವ ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ಆರ್.ಚನ್ನಬಸಪ್ಪ ಮಾತನಾಡಿ, ಓದಿನೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.
ಏಕಾಂತಪ್ಪ, ಶಬೀನಾಬಾನು, ಜಗದೀಶ, ಜಿ.ಕಿರಣ್, ಪಿ.ತಿಪ್ಪೇಸ್ವಾಮಿ, ರಮೇಶ್, ಶಿವಮೂರ್ತಿ ತಂಡದವರು, ಕ್ರಮವಾಗಿ ಸುಗಮ ಸಂಗೀತ, ಜನಪದ ಸಂಗೀತ, ಜನಪದ ಗೀತೆಗಳ ಗಾಯನ, ಸಮೂಹ ನೃತ್ಯ, ಕಿಂದರಜೋಗಿ ಕುಣಿತ, ನಾಸಿಕ್ ಡೋಲು, ಪಿ.ಅನಂತಕೃಷ್ಣ ಮತ್ತು ಚಂಪಕಾ ಶ್ರೀಧರ್ ಅವರಿಂದ ಗಮಕ ಗಾಯನ, ಕೆ.ಪಿ.ಎಂ.ಗಣೇಶಯ್ಯ ನಿರ್ದೇಶನದ ‘ವೈದಾಟ’ ಹಾಸ್ಯನಾಟಕ ಪ್ರದರ್ಶನವಿತ್ತು.
ಮಠದಕುರುಬರಹಟ್ಟಿ ಗ್ರಾಪಂ ಅಧ್ಯಕ್ಷ ಆರ್.ಗಣೇಶ್, ಸದಸ್ಯರಾದ ಬಿ.ಎನ್.ಶಂಕರಮ್ಮ, ಎನ್.ಕಲ್ಲೇಶಪ್ಪ, ರಾಮಾಂಜನೇಯ, ಹರೀಶ್, ಗಿರೀಶ್, ವಿಶ್ವಮಾನವ ಸಂಯುಕ್ತ ಪಪೂ ಕಾಲೇಜು ಪ್ರಾಚಾರ್ಯೆ ಎಚ್.ಆರ್.ಸುಧಾ, ಮುಖ್ಯಶಿಕ್ಷಕ ಬಿ.ಜಿ.ಶಿವರುದ್ರಯ್ಯ, ಶಿಕ್ಷಕ ಜಿ.ಎನ್.ಶಿವಕುಮಾರ್, ಯೋಗಶಿಕ್ಷಕ ಎಂ.ಬಿ.ಮುರಳಿ, ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಮತ್ತಿತರರು ಇದ್ದರು.