ಸುತ್ತೂರು: ಕಲಿಯುವ ಮನಸ್ಸುಗಳು ಮುಕ್ತವಾಗಿದ್ದಾಗ ಮಾತ್ರ ಕಲಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ.ರಾಜಶೇಖರ ಹೇಳಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ ಶ್ರೀ ಕ್ಷೇತ್ರದಲ್ಲಿ ಪ್ರೌಢಶಾಲಾ ಕನ್ನಡ ಮತ್ತು ಆಂಗ್ಲಭಾಷಾ ಶಿಕ್ಷಕರಿಗೆ ಆಯೋಜಿಸಿರುವ ಎರಡು ದಿನಗಳ ಪುನಶ್ಚೇತನ ಕಾರ್ಯಾಗಾರದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದರು.
ಎಲ್ಲವೂ ಗೊತ್ತಿದೆ ಎಂದುಕೊಂಡರೆ ಕಲಿಯಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ವೈಯ್ಯಕ್ತಿಕ ಸಮಸ್ಯೆ ಇದ್ದೇ ಇರುತ್ತವೆ. ಅವುಗಳನ್ನು ದೂರವಿಟ್ಟು ಕಲಿಯುವಂತಾಗಬೇಕು. ವೃತ್ತಿಬದ್ಧತೆಯಿಂದ ಮಾತ್ರ ಶಿಕ್ಷಕರು ಸಂತೃಪ್ತಗೊಳ್ಳಬಹುದು ಎಂದು ನುಡಿದರು.
ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಮಾತನಾಡಿ, ಭಾಷಾ ಪ್ರಯೋಗ ಮಾಡುವಾಗ ಅಪಾರ್ಥ, ಅಭಾಸಗಳಿಗೆ ಎಡೆಮಾಡಿಕೊಡಬಾರದು. ಶಿಕ್ಷಕರು ಮಕ್ಕಳಿಗೆ ಜಾಗರೂಕತೆಯಿಂದ ಕಲಿಸಬೇಕು ಎಂದರು.
ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಹೆಚ್ಚುವರಿ ಸಂಯೋಜನಾಧಿಕಾರಿ ಸಂಪತ್ತು, ವಿಷಯ ಸಂಪನ್ಮೂಲ ವ್ಯಕ್ತಿಗಳಾದ ರವೀಶ್ಕುಮಾರ್, ಎಚ್.ವಿ.ಮಹದೇವಪ್ರಸಾದ್, ಮೋಲಿ ವರ್ಗೀಸ್, ಎಸ್.ಆಶಾ ಇತರರಿದ್ದರು.