ಗುಡಿಬಂಡೆ: ತಾಲೂಕಿನಲ್ಲಿ ಇದುವರೆಗೂ ಕರೊನಾ ಸೋಂಕು ಕಾಣಿಸಿಕೊಳ್ಳದ ಹಿಂದೆ ನಾಗರಿಕರ ಸಹಕಾರದ ಜತೆಗೆ ರೆಡ್ಕ್ರಾಸ ಸಂಸ್ಥೆ, ಕರೊನಾ ಸೈನಿಕರ ಪರಿಶ್ರಮವಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜೀಯಾ ತರನ್ನುಮ್ ಬಣ್ಣಿಸಿದರು.
ತಾಲೂಕಿನ ಬೀಚಗಾನಹಳ್ಳಿಯ ಸಾಂಸ್ಕೃತಿಕ ಭವನದಲ್ಲಿ ಭಾರತೀಯ ರೆಡ್ಕ್ರಾಸ್ ಗುಡಿಬಂಡೆ ತಾಲೂಕು ಶಾಖೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರೊನಾ ಸೈನಿಕರು ಹಾಗೂ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಪ್ರಮಾಣಪತ್ರ ನೀಡಿ ಮಾತನಾಡಿದರು. ಯಾವುದೇ ಲಾಪೇಕ್ಷೆ ಇಲ್ಲದೆ 30 ಕರೊನಾ ಸೈನಿಕರು 3 ತಿಂಗಳು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿ ಮಾದರಿಯಾಗಿದ್ದಾರೆ. ಅಲ್ಲದೇ ಪ್ರತಿ ಗ್ರಾಪಂನಲ್ಲಿ ರಕ್ತದಾನ ಶಿಬಿರ ನಡೆಸುವು ಮೂಲಕ 511 ಯುನಿಟ್ ರಕ್ತ ಸಂಗ್ರಹಿಸಿರುವುದು ಅಭಿನಂದನಾರ್ಹ ಎಂದರು.
ಕರೊನಾ ಸೈನಿಕರು ಇಲಾಖೆಗಳ ಕಾರ್ಯಗಲ್ಲಿ ತೊಡಗಿಸಿಕೊಂಡಿರುವ ಜತೆಗೆ ಮಾಡಿರುವ ಸೇವೆ ಮತ್ತು ಮುಂದಾಳತ್ವ ಗುಣ ತಾಲೂಕಿನ ಇತಿಹಾಸದಲ್ಲಿ ಮರೆಯುವಂತಿಲ್ಲ ಎಂದು ತಹಸೀಲ್ದಾರ್ ಡಿ.ಹನುಮಂತರಾಯಪ್ಪ ಮೆಚ್ಚಗೆ ವ್ಯಕ್ತಪಡಿಸಿದರು.
ಆಯುಷ್ ಇಲಾಖೆಯಿಂದ ರೋಗ ನಿರೋಧಕಶಕ್ತಿ ವೃದ್ಧಿಸುವ ಔಷಧ ವಿತರಿಸಲಾಯಿತು, ಆರಕ್ಷಕ ವೃತ್ತ ನಿರೀಕ್ಷಕ ಎಂ.ಎನ್.ಮಂಜುನಾಥ್ ಮಾತನಾಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಾಬುದ್ದಿನ್, ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ರೆಡ್ಕ್ರಾಸ್ ತಾಲೂಕು ಕಾರ್ಯದರ್ಶಿ ವಕೀಲ ಜಿ.ವಿ.ವಿಶ್ವನಾಥ್, ಖಜಾಂಚಿ ಎಲ್.ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್, ತಾಪಂ ಲೆಕ್ಕಾಧಿಕಾರಿ ರಾಮಾಂಜಿ, ಬೀಚಗಾನಹಳ್ಳಿ ಪಿಡಿಒ ಎ.ಆರ್.ಶ್ರೀನಿವಾಸ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಾರ್ಯಕ್ರಮಾಧಿಕಾರಿ ವಾಹಿನಿ ಸುರೇಶ್ ಇತರರಿದ್ದರು.