ಬೀದರ್: ಬೀದರ್ ಸೇರಿ ರಾಜ್ಯದಲ್ಲಿ ದಿನೇದಿನೆ ಕರೊನಾ ಹೆಚ್ಚಳವಾಗುತ್ತಿದೆ. ಪರೀಕ್ಷಾ ವರದಿ ಬರಲು ವಿಳಂಬವಾಗುತ್ತಿದೆ. ಕರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.
ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭ ಕುರಿತು ಸೋಮವಾರ ಪೂರ್ವಸಿದ್ಧತಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 1700 ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಆಟೋ ಚಾಲಕರು, ನೇಕಾರರು, ಮಡಿವಾಳರಿಗೆ ಪರಿಹಾರ ಘೋಷಿಸಿದರೂ ಯಾರ ಕೈಗೂ ಹಣ ಸಿಕ್ಕಿಲ್ಲ. ಪ್ಯಾಕೇಜ್ನಲ್ಲಿ ಅಕ್ಕಸಾಲಿಗರು, ದೋಬಿ ಸೇರಿ ಅನೇಕ ಕುಶಲ ಕರ್ಮಿ ಗಳು ಬಿಟ್ಟು ಹೋಗಿದ್ದು, ಇಂಥ ಶ್ರಮಿಕರನ್ನು ಪ್ಯಾಕೇಜ್ನಲ್ಲಿ ಸೇರಿಸಬೇಕೆಂದು ಆಗ್ರಹಿಸಿದರು.
ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ವ್ಯಾಪ್ತಿಗೆ ಬರದ ದೇಶದ ಪ್ರತಿ ಪರಿವಾರಕ್ಕೆ ಕೇಂದ್ರ ಸರ್ಕಾರ 10 ಸಾವಿರ ರೂ. ನೇರವಾಗಿ ಅವರ ಖಾತೆಗೆ ಜಮೆ ಮಾಡಬೇಕು. ಪ್ಯಾಕೇಜ್ ಘೋಷಿಸಿ ಕೈತೊಳೆದುಕೊಳ್ಳುವುದರಿಂದ ಬಡವರಿಗೆ ಏನೂ ಫಾಯಿದಾ ಆಗದು. 20 ಲಕ್ಷ ಕೋಟಿ ರೂ. ಪ್ಯಾಕೇಜ್ನಿಂದ ಯಾರಿಗೂ ಅನುಕೂಲವಾಗಿಲ್ಲ. ಜನರಿಗೆ ಮರಳು ಮಾಡಲು ಕೇಂದ್ರ ಸರ್ಕಾರ ಇದನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಚ್ಛೇ ದಿನ್ ಬಂದಿಲ್ಲ. ಬದಲಾಗಿ ಸಮಸ್ಯೆಗಳು ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ಪಾತಾಳಕ್ಕಿಳಿದು ದೇಶ 20 ವರ್ಷ ಹಿಂದಕ್ಕೆ ಹೋಗಿದೆ ಎಂದು ದೂರಿದರು.
ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಸರಳ ಹಾಗೂ ವಿನೂತನವಾಗಿ ನಡೆಸಲು ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ. ನೇರ ಪ್ರಸಾರದಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.