ಕಾರವಾರ: ಕರೊನಾ ವೈರಸ್ ಕುರಿತು ಜಿಲ್ಲಾದ್ಯಂತ ಭೀತಿಯ ವಾತಾವರಣ ಕಂಡು ಬರುತ್ತಿದ್ದು, ಇದರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ಕುಮಾರ್ ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಬುಧವಾರ ವಿಡಿಯೋ ಸಂವಾದ ನಡೆಸಿ ಸಲಹೆ ಸೂಚನೆ ನೀಡಿದರು.
ಗ್ರಾಮ ಮತ್ತು ತಾಲೂಕು ಪಂಚಾಯಿತಿ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ್ಲ ಕರೊನಾ ವೈರಸ್ ಕುರಿತಾಗಿ ಆರೋಗ್ಯ ಇಲಾಖೆ ಮುಂದಾಳತ್ವದಲ್ಲಿ ಸಭೆಗಳನ್ನು ನಡೆಸಬೇಕು. ಅಲ್ಲದೆ, ಅಧಿಕಾರಿಗಳು ಖುದ್ದಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲಿಸಬೇಕು ಹಾಗೂ ಶಾಲೆ,ಕಾಲೇಜ್ ವಿದ್ಯಾರ್ಥಿಗಳಲ್ಲಿ ಕರೊನಾ ಕುರಿತಾಗಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು. ಗ್ರಾಮ, ಪಟ್ಟಣ ಹಾಗೂ ತಾಲೂಕು, ಪಂಚಾಯಿತಿಗಳು, ಜನರು ಕರೊನಾ ವೈರಸ್ ಸಂಬಂಧಿಸಿದಂತೇ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂಬ ಜನಜಾಗೃತಿಯನ್ನು ಪರಿಣಾಮಕಾರಿಯಾಗಿ ನಗರ,ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಮಾಡಬೇಕು ಎಂದರು.
ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಸಾಧ್ಯವಾದಷ್ಟು ಹೆಚ್ಚಿಸಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ಸೌಲಭ್ಯಗಳಿಂದ ಯಾವ ಆಸ್ಪತ್ರೆಗಳೂ ವಂಚಿತವಾಗಬಾರದು ಹಾಗೂ ಖಾಸಗಿ ವೈದ್ಯರ ಸಹಾಯವನ್ನು ಪಡೆಯಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಎಂ.ರೋಶನ್ ಮಾತನಾಡಿ, ಪ್ರಾಥಮಿಕ ಚಿಕಿತ್ಸೆ, ಹಾಗೂ ರಕ್ಷಣಾ ಕವಚಗಳತ್ತ ಹೆಚ್ಚಿನ ಗಮನ ವಹಿಸಬೇಕಾದ ಅಗತ್ಯವಿದೆ. ಆರೋಗ್ಯ ರಕ್ಷಾ ಸಮಿತಿ ಅಡಿ ಹಣ ಬಳಸಿಕೊಂಡು ಅಗತ್ಯತೆಯುಳ್ಳ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ ಎಂದರು. ಜಿಲ್ಲೆಯ ಗೋಕರ್ಣ, ಮುಂಡಗೋಡನಂತಹ ಪ್ರವಾಸಿ ಸ್ಥಳಗಳಿಗೆ ಹೆಚಿನ್ಚ ಜನರು ಭೇಟಿ ನೀಡುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆಂಟಿವೈರಸ್ ಸ್ಪ್ರೇ ಸಿಂಪಡಿಸಲು ಚಿಂತಿಸಲಾಗುವುದು ಎಂದರು. ಎಸ್ಪಿ ಶಿವ ಪ್ರಕಾಶ ದೇವರಾಜು, ಡಿಎಚ್ಒ ಡಾ. ಜಿ.ಎನ್.ಅಶೋಕ ಕುಮಾರ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಇದ್ದರು.