ಚಿತ್ರದುರ್ಗ: ಕನ್ನಡ ನಾಮಫಲಕ ಅಳವಡಿಸುವಂತೆ, ಇತರೆ ಭಾಷೆಗಳ ನಾಮಫಲಕ ತೆರವಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಹೋರಾಟಕ್ಕೆ ಮುಂದಾದ ಕರವೇ ಕಾರ್ಯಕರ್ತರನ್ನು ಬಂಧಿಸಿದ್ದು, ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೆಲ ಠಾಣೆಗಳಲ್ಲಿ ಕಾರ್ಯಕರ್ತರಿಗೆ ಹಿಂಸಿಸಿರುವ ಮಾಹಿತಿ ಇದೆ. ಕನ್ನಡಪರ ಹೋರಾಟಗಾರರಿಗೆ ಈ ರೀತಿ ಮಾಡುವುದು ಎಷ್ಟು ಸರಿ. ಕೆಲವರನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಕೂಡಲೇ ಇನ್ನುಳಿದವರನ್ನೂ ಬಿಡುಗಡೆಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಹೋರಾಟದ ವೇಳೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ಬಂಧಿಸಿದ್ದು, ಖಂಡನೀಯ. ಪೊಲೀಸರ ಮೂಲಕ ಸಂಘಟನೆಯನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕನ್ನಡಪರ ಹೋರಾಟಗಾರರನ್ನು ಧಮನ ಮಾಡುವುದು ಮುಂದುವರೆದಲ್ಲಿ, ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆ ಜಿಲ್ಲಾ ಅಧ್ಯಕ್ಷ ಟಿ.ರಮೇಶ್, ಮಹಿಳಾ ಅಧ್ಯಕ್ಷೆ ಚಂದ್ರಕಲಾ, ಪದಾಧಿಕಾರಿಗಳಾದ ವಿಜಯಕುಮಾರ್, ಎಸ್.ಬಿ.ಗಣೇಶ್, ಜಿ.ರಾಜಪ್ಪ, ಘನಶ್ಯಾಮ್, ಪ್ರಸಾದ್ ಮಲ್ಲ, ಬಿ.ವೆಂಕಟೇಶ್, ಟಿ.ಕೆ.ಶಿವಮೂರ್ತಿ, ಆರ್.ಜಿ.ಲಕ್ಷ್ಮ್ಮಣ, ರಮೇಶ್, ಜಯಲಕ್ಷ್ಮಿ ಇತರರಿದ್ದರು.