More

    ಕೆಂಪನಹಳ್ಳಿಯಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ

    ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಗ್ರಾಮ ಚಲೋ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಿದ್ದೇವೆ. ಈ ಮೂಲಕ ಜಿಲ್ಲೆಯ ಪ್ರತಿ ಮನೆಗಳಿಗೂ ತೆರಳಿ ಕೇಂದ್ರ ಸರ್ಕಾರದ ಸಾಧನೆ ಕುರಿತ ಕರಪತ್ರಗಳನ್ನು ಹಂಚಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಹೆಚ್ಚಿನ ಸ್ಥಾನ ಗೆಲ್ಲುವ ಸಂಕಲ್ಪ ಹೊಂದಿದ್ದೇವೆ ಎಂದು ಅಭಿಯಾನದ ಸಂಚಾಲಕ ಬಿ.ರಾಜಪ್ಪ ತಿಳಿಸಿದರು.

    ನಗರದ ಕೆಂಪನಹಳ್ಳಿಯ ೩೫ನೇ ವಾರ್ಡ್ನ ಕೆಂಪನಹಳ್ಳಿಯಲ್ಲಿ ಕೇಂದ್ರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಯುಷ್ಮಾನ್ ಭಾರತ್, ಜಲಜೀವನ ಮಿಷನ್, ಕಿಸಾನ್ ಸಮ್ಮಾನ್, ನಾರಿಶಕ್ತಿ ಅಧಿನಿಯಮ, ಉಜ್ವಲಾ ಯೋಜನೆ, ಜನೌಷಧ ಕೇಂದ್ರಗಳು ಸೇರಿದಂತೆ ಮೋದಿ ನೇತೃತ್ವದ ಸರ್ಕಾರದಲ್ಲಿ ಹಲವಾರು ಜನಪರ ಅಭಿವೃದ್ಧಿ ಕೆಲಸಗಳಾಗಿವೆ. ಇವುಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಹೀಗಾಗಿಯೇ ಮತ್ತೊಮ್ಮೆ ಮೋದಿ ೩.೦ ಎಂಬ ಘೋಷ ವಾಕ್ಯದೊಂದಿದೆ ಅಭಿಯಾನ ಆರಂಭಿಸಿದ್ದೇವೆ ಎಂದು ಹೇಳಿದರು.
    ಜಿಲ್ಲೆಯಾದ್ಯಂತ ಒಟ್ಟಾರೆ ೧೨೨೨ ಬೂತ್‌ಗಳಿಗೂ ಪ್ರವಾಸಿ ಕಾರ್ಯಕರ್ತ ಹಾಗೂ ಸಂಚಾಲಕರನ್ನು ನೇಮಕ ಮಾಡಲಾಗಿದೆ. ಅವರು ಕೇಂದ್ರ ಸರ್ಕಾರದ ಹತ್ತು ವರ್ಷಗಳ ಸಾಧನೆ ಕುರಿತ ಮಾಹಿತಿಯನ್ನು ಆಯಾ ಭಾಗಗಳ ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಆಶಾಕಾರ್ಯಕರ್ತೆಯರು, ಸಂಘದ ಕಾರ್ಯಕರ್ತರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಕೊಡುಗೆಗಳನ್ನು ಮನದಟ್ಟು ಮಾಡಲಿದ್ದಾರೆ ಎಂದು ತಿಳಿಸಿದರು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಎ.ನರೇಂದ್ರ ಮಾತನಾಡಿ, ದೇಶದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಯೋಜನೆಗಳನ್ನು ಪಡೆದುಕೊಂಡವರಿಗೆ ಮತ್ತೊಮ್ಮೆ ನೆನಪು ಮಾಡಲಿದ್ದೇವೆ. ಈ ಮೂಲಕ ದೇಶಕ್ಕಾಗಿ ಮೋದಿಯನ್ನು ಮತ್ತೊಮ್ಮೆ ಆಯ್ಕೆಗೊಳಿಸಿ ಎಂದು ಜನರಲ್ಲಿ ಮನವಿ ಮಾಡಲಾಗುವುದು ಎಂದರು.
    ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಜನೋಪಯೋಗಿ ಯೋಜನೆಗಳ ಕುರಿತ ಕರಪತ್ರ ಹಂಚಲಾಗುತ್ತಿದೆ. ಪ್ರತಿಯೊಬ್ಬರೂ ಕೂಡಾ ಸದೃಢ ದೇಶಕ್ಕಾಗಿ ತಮ್ಮ ದೈನಂದಿನ ಚಟುವಟಿಕೆ ನಡೆಸುವ ವೇಳೆಯಲ್ಲೇ ಕೇಂದ್ರದ ಯೋಜನೆ ಕುರಿತು ಅಲ್ಲಲ್ಲಿ ಚರ್ಚಿಸಬೇಕು ಎಂದು ಮನವಿ ಮಾಡಿದರು.
    ಈ ಸಂದರ್ಭದಲ್ಲಿ ಬಿಜೆಪಿ ನಿಯೋಜಿತ ನಗರಾಧ್ಯಕ್ಷ ಪುಷ್ಪರಾಜ್, ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ನಗರಸಭಾ ಸದಸ್ಯೆ ಲಲಿತಾ ರವಿನಾಯ್ಕ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪರಮೇಶ್, ಬೂತ್ ಅಧ್ಯಕ್ಷ ಮಹೇಶ್‌ಕುಮಾರ್, ಮುಖಂಡರುಗಳಾದ ರಾಜಕುಮಾರ್, ರಾಕೇಶ್, ಜಯಪ್ರಕಾಶ್, ರಾಜಣ್ಣ, ನವೀನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts