ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಇಲ್ಲಿಯ ಕಿಮ್ಸ್ನ ನೇತ್ರವಿಜ್ಞಾನ ವಿಭಾಗದ ವೈದ್ಯರು, 28 ವರ್ಷದ ಮಹಿಳೆಯೊಬ್ಬರ ಕಣ್ಣಿನ ಕೆಳ ಭಾಗದಲ್ಲಿ ಸಿಲುಕಿ ಮುರಿದಿದ್ದ 7 ಇಂಚಿನ ಟೂತ್ ಬ್ರೆಷ್ ಅನ್ನು ಶಸ್ತ್ರ ಚಿಕಿತ್ಸೆ ಮೂಲಕ ಬುಧವಾರ ಹೊರ ತೆಗೆದಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ಬಳಿಯ ಹಿರೂರು ಗ್ರಾಮದ ವಿನೋದಾ ತಳವಾರ್ (28) ಎನ್ನುವವರು ಈ ಅಪರೂಪದ ಶಸ್ತ್ರ ಚಿಕಿತ್ಸೆಗೆ ಒಳಗಾದವರು.
ನಾಲ್ಕು ವರ್ಷದ ಮಗಳು ಹಲ್ಲು ಉಜ್ಜುವಾಗ ಇದ್ದಕ್ಕಿದ್ದಂತೆ ಟ್ರೂತ್ ಬ್ರಷ್ ಸಿಡಿದು, ಪಕ್ಕದಲ್ಲಿದ್ದ ತಾಯಿ ವಿನೋದಾ ಎಡಗಣ್ಣಿಗೆ ತಾಗಿ ಸಿಲುಕಿದೆ. ಕುಟುಂಬದ ಸದಸ್ಯರು, ಹೊರ ತೆಗೆಯಲು ಪ್ರಯತ್ನಿಸಿದಾಗ ಮುರಿದಿದೆ. ಕೂಡಲೇ ಆಕೆಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಕಿಮ್ಸ್ಗೆ ಶಿಫಾರಸ್ಸು ಮಾಡಿದ್ದರು. ಕಿಮ್್ಸ ವೈದ್ಯರು ಮುಖದ ಸಿಟಿ ಸ್ಕ್ಯಾನ್, ಸಿಟಿ ಆಂಜಿಯೋಗ್ರಾಮ್ ಮಾಡಿದಾಗ ಕಣ್ಣಿನ ಕೆಳಗಡೆ ಬ್ರಷ್ ಸಿಲುಕಿರುವುದು ಪತ್ತೆಯಾಗಿತ್ತು.
ವರದಿಯಲ್ಲಿ ಎಡಗಣ್ಣು ಸಂಪೂರ್ಣ ಹಾನಿಯಾಗಿರುವುದು ಕಂಡುಬಂದಿತ್ತು. ಡಾ. ಮಂಜುನಾಥ ವಿಜಾಪುರ, ಡಾ. ವಸಂತ ಕಟ್ಟಿಮನಿ, ಡಾ. ಅನುರಾಧ ನಾಗನಗೌಡರ, ಡಾ. ಸ್ಪೂರ್ತಿ ಶೆಟ್ಟಿ ಇತರರ ತಂಡದ ಸಹಕಾರದಿಂದ ಶಸ್ತ್ರ ಚಿಕಿತ್ಸೆ ನಡೆಸಿ, ಟೂತ್ ಬ್ರಷ್ ಹೊರ ತೆಗೆಯಲಾಗಿದೆ.
ಕೋಟ್…
ಹಳಿಯಾಳದ ವ್ಯಕ್ತಿಯೊಬ್ಬರ ಮ್ಯಾಕ್ಸಿಯೋಫೇಷಿಯಲ್ ಭಾಗದಲ್ಲಿ ಸಿಲುಕಿದ್ದ 6 ಸೆಂ.ಮೀ. ಉದ್ದ ಚಾಕು 2 ತಿಂಗಳ ಹಿಂದೆ ಹೊರ ತೆಗೆಯಲಾಗಿತ್ತು. ಈ ಬಾರಿ 7 ಇಂಚು ಉದ್ದದ ಟೂತ್ಬ್ರಷ್ ಹೊರ ತೆಗೆಯಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ರೋಗಿಯು ಆರೋಗ್ಯವಾಗಿದ್ದು, 2-3 ದಿನದಲ್ಲಿ ಡಿಸ್ಚಾರ್ಜ್ ಮಾಡಲಾಗುವುದು.
-ಡಾ. ಮಂಜುನಾಥ ವಿಜಾಪುರ, ಸಹ ಪ್ರಾಧ್ಯಾಪಕ, ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸಾ ವಿಭಾಗ ಕಿಮ್್ಸ