ಸಿದ್ದಾಪುರ: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಅಪಾರ ಪ್ರಮಾಣದ ಬೆಳೆ ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ 18 ಕಾಡಾನೆಗಳನ್ನು ತೋಟದ ಕಾರ್ಮಿಕರೇ ಗುರುವಾರ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಲ್ಪಿ ಕಾಫಿ ತೋಟದಲ್ಲಿ ಹಾಡಗಲಿನಲ್ಲೇ ಮರಿಯಾನೆಗಳೊಂದಿಗೆ 18 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದವು.
ತೋಟ ಕೆಲಸಕ್ಕೆ ತೆರಳುವ ಮುನ್ನ ಕಾರ್ಮಿಕರಾದ ಗಣೇಶ್, ಪವನ್ ಎಂಬವರಿಗೆ ಕಾಡಾನೆಗಳ ಹಿಂಡು ಪ್ರತ್ಯಕ್ಷಕೊಂಡವು. ತಕ್ಷಣ ಇತರ ಕಾರ್ಮಿಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತೋಟ ಕೆಲಸಕ್ಕೆ ಬಂದ ವಿಕ್ರಂ, ರಾಜ, ಕಿಟ್ಟಿ, ರಘು ಸೇರಿದಂತೆ ಇತರ ಕಾರ್ಮಿಕರು ಕಾಡಾನೆಗಳ ಗುಂಪನ್ನು ಕಂಡು ಭಯಗೊಂಡಿದ್ದರು. ಕಾಡಾನೆಗಳ ಹಾವಳಿಯಿಂದ ಒಂದು ದಿನದ ಕೆಲಸ ಇಲ್ಲದಂತಾಗುತ್ತದೆ ಎಂದು ಭಾವಿಸಿ ಧೈರ್ಯ ತೋರಿದ ಕಾರ್ಮಿಕರು, ಮರದ ಮೇಲೆ ಹತ್ತಿ ಕಿರುಚುವ ಶಬ್ದ ಮಾಡುವ ಮೂಲಕ ಬೇರ್ಪಟ್ಟ ಆನೆಗಳನ್ನು ಒಂದುಗೂಡಿಸಿ ಶಿಲ್ಪಿ ಕಾಫಿ ತೋಟದಿಂದ ಚಿಕ್ಕನಹಳ್ಳಿ ಮಾರ್ಗವಾಗಿ ಒಂದು ಕಿ.ಮೀ.ವರೆಗೆ ಆನೆಗಳನ್ನು ಹಿಮ್ಮಟ್ಟಿಸಿಕೊಂಡು ಸಮೀಪದ ದುಬಾರೆ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.